Sunday, October 3, 2010

ಉಸಿರೊಳಗಣ ಬಣ್ಣ

And the line goes:
multitude are there n 'l be,
but honour yourself with the humbleness of accepting commoners commonness
but not really being one...


ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಅವನು ಕಡೆಯ ಬಾರಿಗೆಂದು ಹುಡುಕಲು ಆರಂಭಿಸಿದ.
ಕಟ್ಟಕಡೆಯ ಬಾರಿಯಾದರೂ ತನ್ನದೊಂದು ಕನಸಿನ ಸೌಧ ಕಟ್ಟಲು ಸಾಧ್ಯವೇ? ಮಹತ್ವಾಕಾಂಕ್ಷೆಗಳ ಮೂಟೆಯನನ್ನು ಪಕ್ಕಕ್ಕಿಟ್ಟು ಅದರಲ್ಲಿದ್ದ ಒಂದಾದರೂ ಬೀಜವನ್ನು ನಿಜಕ್ಕೂ ವಾಸ್ತವದಲ್ಲಿ ಮೊಳಕೆ ಒಡೆಯಿಸಲು ಸಾಧ್ಯವೇ ಎನ್ನುವಲ್ಲಿಗೆ ಬಂದು ನಿಂತಿತ್ತು ಜೀವನ..

ಅಲ್ಲಿಗೆ ಅಂತಿಮ ಹೋರಾಟಕ್ಕೆ ರಣಾಂಗಣ ಸನ್ನದ್ಧವಾಗಿತ್ತು. ಅಲ್ಲಿ ಶತೃವೂ ಅವನೇ ಮಿತ್ರನೂ ಅವನೇ, ಹೆದೆಯೇರಿಸುವ ಧನುರ್ಧಾರಿಯೂ ಅವನೇ, ತೋಪು ಹಾರಿಸುವ ಫೌಜುದಾರನೂ ಅವನೇ. ತನ್ನೊಡನೆ ತನಗೇ ಹೋರಾಟ. ಜೀವನ ಪಾತ್ರೆಯಲ್ಲಿನ ಬಣ್ಣಗಳೆಲ್ಲಾ ಅದಾಗಲೇ ಸೂಕ್ತ ಆರೈಕೆ ಇಲ್ಲದೆ ಗಟ್ಟಿಯಾಗಿದ್ದವು. ಬದುಕಿನ ಕ್ಯಾನ್ವಾಸ್ ಮೇಲೆ ಮೂಡಿಸಲೆಂದು ಏನೆಲ್ಲಾ ಜತನ ಮಾಡಿದ್ದರೂ ಕಾಲನ ಉರಿಬೇಗೆಗೆ ಹೆಕ್ಕಳಿಕೆ ಎದ್ದಿದ್ದವು. ಇದ್ದ ಬದ್ದ ಆಸೆಗಳನ್ನೆಲ್ಲಾ ಕಕ್ಕಿದ್ದ ಮನಸಂತೂ ಎಂದೋ ಖಾಲಿಯಾಗಿತ್ತು. ಎದುರಿಗಿದ್ದ ರಸ್ತೆಯೂ ಸೊರಗಿದ ಹಾಗೆ ಕಾಣುತ್ತಿತ್ತು. ಹಾಗೆ ಸಾಗುವಾಗ ಶತಮಾನದ ಹಳೆಯ ಲೇಖನಿಯೊಂದು ದಾರಿ ಬದಿಯಲ್ಲಿ ಸಿಕ್ಕಿತು. ಮುಂದೊಂದು ತಗ್ಗಿನಲ್ಲಿ ಗತಕಾಲದ ಶಾಯಿ ಕುಡಿಕೆ ಬಿದ್ದಿತ್ತು.

ಬೋರಲು ಬಿದ್ದಿದೆ
ಶಾಯಿ ಇಲ್ಲದ ಕುಡಿಕೆ;
ಶಾಯಿ ಮುಗಿದರೂ ಪರವಾಗಿಲ್ಲ
ಬರೆಸಿಕೊಳ್ಳುವ
ಪದಗಳೇ ಮುಗಿದರೆ ಕಷ್ಟ


ಹಾಗೆಂದುಕೊಂಡು ಹೆಜ್ಜೆ ಹಾಕಿದ. ಅಲ್ಲೊಂದು ಹೂವು ಬಾಡಿ ಬಿದ್ದಿತ್ತು. ಅದರ ಬಣ್ಣ ಕರಗಿ ನೆಲದೊಳಗೆ ಇಳಿಯುತ್ತಿತ್ತು. ಹಾಗೆ ಅದನೆತ್ತಿಕೊಂಡ. ಅದರೊಳಗೆ ಮೊನ್ನೆ ಇದ್ದಿರಬಹುದಾದ ಸುಗಂಧವ ಇಂದು ಆಘ್ರಾಣಿಸಿದ. ಮೆಲ್ಲನೆ ನೇವರಿಸಿ ಹೇಳಿದ, 'ಚಿಂತೆಯಿಲ್ಲ ಬಿಡು, ನಿನ್ನದೊಂದು ಸುಂದರ ಕಾವ್ಯ ಮೊನ್ನೆಯ ಗಾಳಿಯಲ್ಲಿ ಇದೆ. ಕಣ್ಣಾಚೆಗಿನ, ಕಿವಿಯಾಚೆಗಿನ ಅಷ್ಟೇ ಅಲ್ಲ, ಕವಿಯ ಆಚೆಗಿನ ಕಾವ್ಯ ಅದು. ಮೊನ್ನಿನ ಗಾಳಿಯಲ್ಲಿ ನೀನು ಬರೆದಿರುವ ಸುಗಂಧೀ ಸಾಲುಗಳು ಯಾವತ್ತೂ ನನ್ನ ಉಸಿರಾಗಲಿ' ಎಂದ. ಬಾಡಿದ್ದ ಹೂವು ಬಣ್ಣ ಮಾಸುವ ಮುನ್ನ ಮನಸಾರೆ ನಕ್ಕಿತು, ಸಂತೃಪ್ತಿಯಿಂದ. ಭಗವಂತನೇ ಕೈಯಲ್ಲಿ ಎತ್ತಿಕೊಂಡು ರಮಿಸಿ, ಮುದ್ದಿಸಿದ ಹಾಗೆ ಮುದಗೊಂಡು ನೇರ ಸ್ವರ್ಗಕ್ಕೆ ಜಿಗಿಯಿತು.

ಬೆಟ್ಟದಾಚೆಗಿನ ಕೊರಕಲು ಕಣಿವೆಯಲ್ಲಿ ತನ್ನವೇನಾದರೂ ಕನಸುಗಳು ತೇಲುತ್ತಿವೆಯೇನೋ ಎಂದು ಕೊರಗುತ್ತಲೇ ನೋಡಲು ಹೊರಟಿದ್ದವನ ಮನಸು ಈಗ ಬದಲಾಗಿತ್ತು. ತನ್ನೊಳಗಿನ ಯುದ್ದವ ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಿದ. ಹಳೆ ಬಣ್ಣಗಳಿಗೆ ತರ್ಪಣ ಬಿಟ್ಟ. ಸೀದಾ ಹೊರಟವನು ಸಂತೆಯಲ್ಲಿ ಕುಂತ, ಮಾಲ್ ಗಳಲಿ ಮಿಂದ. ಗದ್ದಲದಲ್ಲಿನ ಮೌನ ಆಲಿಸಿದ, ಮೌನದಲ್ಲಿನ ಗದ್ದಲ ಹುಡುಕಿದ. ಬಣ್ಣವೇ ಇಲ್ಲದ ಕನಸುಗಳ ಕಂಡ, ಶೂನ್ಯದೊಳಗಿನ ಬಣ್ಣಗಳ ಅಂಗೈ ಮೇಲೆ ಸುರುವಿಕೊಂಡ.
ಮೌನದಲ್ಲಿ ಕುದಿಯುವುದನ್ನೂ, ಕುಲುಮೆಯ ತಿದಿಯಲ್ಲಿ ಧ್ಯಾನಿಸುವುದನ್ನೂ ಕಂಡುಕೊಂಡ. ಕಡೆಗೆ ಗಂಭೀರವಾಗಿದ್ದೂ ಭೋರ್ಗರೆಯುತ್ತಾ, ತಣ್ಣನೆಯ ಕಣ್ಣುಗಳಲ್ಲೇ ಅಬ್ಬರಿಸುತ್ತಾ ಮತ್ತೊಮ್ಮೆ ಮುಗಿಬಿದ್ದ - ಜೀವನದ ಮೇಲಲ್ಲಾ, ಕಾಲನ ಮೇಲೆ...

ಯಾರೋ ಮಾತಾಡಿಕೊಂಡರು ಇಷ್ಟಕ್ಕೆಲ್ಲಾ ಕಾರಣ ಅವನು ಸೌಗಂಧೀ ಕಾವ್ಯವನ್ನು ಉಸಿರನಲ್ಲಿಯೇ ಓದಿದ್ದು ಎಂದು...
ಇರಬಹುದೇನೋ!!!

Monday, August 16, 2010

ಶಿವಶಕ್ತಿಯರ ನಶೆ

ಮಾತುಗಳಲ್ಲಿ ನಕ್ಷತ್ರ ಸುರಿವ ಹೊತ್ತು ಅದು...

ಅಲ್ಲೊಬ್ಬ ಬೈರಾಗಿ ಬೀದಿ ಬದಿಯಲ್ಲಿ ಅಪರಾತ್ರಿ ಸಾಗುತ್ತಾ ಕಾಲಿಗೆ ತೊಡರಿದ ಅಕ್ಷರಗಳನೆಲ್ಲಾ ಹೆಕ್ಕಿ, ಹೆಕ್ಕಿ ತೆಗೆದು ಜೋಳಿಗೆಯಲ್ಲಿ ಜತನದಿಂದ ತುಂಬುತ್ತಾ ಹೆಜ್ಜೆ ಹಾಕಿದ್ದ. ಅವ ಹಾಗೆ ಅಲೆಯುವಾಗ ಆ ಮೆಟ್ರೋ ಸಿಟಿಯ ಪಬ್ ಗಳಲ್ಲಿ ನಿಶೆ ಎನ್ನುವುದು ತುರೀಯ ತಲುಪಿತ್ತು. ಬೀದಿಬದಿಗಳಲ್ಲಿ ರಾತ್ರಿಕೋವಿದರಿಗೆಂದು ತೆಗೆದಿದ್ದ ಟೀ ಅಂಗಡಿಗಳ ಬಿಸಿನೆಸ್ ಜೋರಿತ್ತು. ಇದ್ಯಾವುದರ ಪರಿವೆಯೂ ಇಲ್ಲದೆ ಪಬ್ಬು, ಡ್ಯಾನ್ಸ್ ಬಾರ್, ಡಿಸ್ಕೋಥೆಕ್, ಲೈವ್ ಬ್ಯಾಂಡ್ ಗಳ ಸುತ್ತಮುತ್ತ ನೆಲವನ್ನೇ ಬಗೆಯುವನಂತೆ ನೋಡುತ್ತಾ ನಡೆದಿದ್ದ ಬೈರಾಗಿ. ಹಾಗೆ ಅವನ ಪಾದ ಬೆಳೆಯುತ್ತಾ ಎಲೀಟ್ ಪಬ್ ಬಳಿ ಬಂದು ಗಕ್ಕನೆ ನಿಂತು ಬಿಟ್ಟಿತು. ಅವನ ಕಣ್ಣಲ್ಲಿ ನಿಹಾರಿಕೆಗಳೇ ಬೆಳಗಿದವು. ಹುಡುಕುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ ಹುಡುಕಾಟ ಮುಗಿದಾಗ ಆಗುವ ತೊಳಲಾಟವೂ ಅವುಗಳಲ್ಲಿ ಇತ್ತು ಎನ್ನುವುದನ್ನೂ ಅಲ್ಲಗೆಳೆಯುವಂತಿಲ್ಲ. ತಾನು ಶತಶತಮಾನದಿಂದ ನಿರೀಕ್ಷಿಸಿದ್ದ ಆ ಒಂದು ಕ್ಷಣ ಸಿಕ್ಕೇ ಬಿಟ್ಟಿತ್ತಲ್ಲಾ, ಇದು ನಿಜವೇ ಎಂದು ಮತ್ತೆ ಮತ್ತೆ ಕೇಳಿಕೊಂಡ. ಇಷ್ಟು ವರ್ಷ ನೆಲ ದಿಟ್ಟಿಸಿ ಬದುಕಿದ್ದು ಸಾರ್ಥಕವಾಯಿತು ಎಂದುಕೊಂಡವನೇ ತನ್ನ ಭಾವನೆಗಳ ಓಘಕ್ಕೆ ಕಡಿವಾಣ ಹಾಕಿ ತಾನು ಕಂಡ, ನೆಲದಲ್ಲಿ ಬಿದ್ದಿದ್ದ ಆ ಅಮೂಲ್ಯ 'ಪದ'ವನ್ನು ಕಣ್ರೆಪ್ಪೆ ಕದಲುವುದರೊಳಗೆ ಗಕ್ಕನೆ ಎತ್ತಿ ಜೋಳಿಗೆಯೊಳಗೆ ಹಾಕಿ ದಡಬಡನೆ ನಡೆದು ಬಿಟ್ಟ.

ರಸ್ತೆಯಿಂದ ಪಕ್ಕದ ಬೀದಿಗೆ ಬಿದ್ದು, ಯಾವ್ಯಾವುದೋ ಗಲ್ಲಿ ಅಲೆದು ಲಗುಬಗೆಯಿಂದ ಸಿಟಿಯ ಅಂಚಿನತ್ತ ಬೀಸತೊಡಗಿದ. ಸಿಟಿಯೊಳಗಿನ ಬೆಳಕಿನ ಗದ್ದಲ ಕಡಿಮೆಯಾಗಿ ಊರಂಚಿನ ನಿಯಾನ್ ಬಲ್ಬ್ ಗಳು ಗತಕಾಲದ ತಮ್ಮ ಐತಿಹ್ಯ ನೆನೆಯುತ್ತಾ ಗೊಣಗಿಕೊಳ್ಳುತ್ತಿದ್ದ ದಾರಿಗುಂಟ ಸಾಗಿದ. ಅವ ಹಾಗೆ ಊರ ಕೊನೆ ದಾಟುವ ಹೊತ್ತಿಗೆ ಗೂಬೆಗಳು ದಣಿದಿದ್ದವು, ನಾಯಿಗಳು ಬೊಗಳಿ, ಬೊಗಳಿ ಬೇಸತ್ತು ಇಬ್ಬನಿ ಮೂಡಲು ಇನ್ನೂ ಒಂದುವರೆ ಜಾವ ಇರುವಾಗಲೇ ಬಾಲ ಮುದುರಿ ಅಲ್ಲಲ್ಲೇ ಬೆಚ್ಚಗೆ ಬಿದ್ದುಕೊಂಡಿದ್ದವು. ಇದಾವುದನ್ನೂ ಗಮನಿಸುವ ವ್ಯವಧಾನವಿಲ್ಲದಂತೆ ಬಿರಬಿರನೆ ಹೆಜ್ಜೆ ಹಾಕಿದ ಬೈರಾಗಿ ಎಂದಿಗಿಂತ ಅರೆ ತಾಸು ಮುಂಚಿತವಾಗಿಯೇ ಊರಾಚೆಯ ಮಂಟಪ ತಲುಪಿದ.

ಹಾಗೆ ಬಂದವನೇ ಎಣ್ಣೆಯಿಲ್ಲದ ಹಣತೆಯಲ್ಲಿ ನೀರು ತುಂಬಿ, ಬತ್ತಿ ಇಲ್ಲದ ದೀಪ ಹಚ್ಚಿದ. ಅದೇ ದೀಪದಲ್ಲೇ ಚಿಲುಮೆ ಹಚ್ಚಿ ಉಲ್ಟಾ ತಿರುಗಿಸಿ ಬೆಂಕಿ ತುದಿಯ ಬಾಯಿಗಿಟ್ಟು ಹೊಗೆಯ ಬಸಿದುಕೊಂಡ. ಚಂದಿರನ ತಲೆದಿಂಬಾಗಿಸಿ ಕಣ್ಣು ಬಿಟ್ಟುಕೊಂಡೇ ನಿದ್ದೆಗೆ ಜಾರಿದ. ಒಂದರೆ ತಾಸು ಹಿಂದಕ್ಕೆ ಜಾರಿರಬಹುದು ಯಾರೋ ಆಕಳಿಸುತ್ತಾ ಅತ್ತಿತ್ತ ಮಗ್ಗಲು ಬದಲಿಸುವ ಸದ್ದಾಯಿತು. ಬಿಟ್ಟ ಕಣ್ಣು ಮುಚ್ಚದೇ ಕೇಳಿದ,"ಯಾಕೆ, ನಿದ್ದೆ ಬರಲಿಲ್ಲವಾ?'

ಅತ್ತಿಂದ ಸಣ್ಣ ದನಿ ಉಸುರಿತು, 'ಅಲ್ಲೋ ಬೈರಾಗಿ, ನಾನು ಅಲ್ಲೆಲ್ಲೋ ಮಣ್ಣಲ್ಲಿ ಗಡದ್ದಾಗಿ ಮಾಸಿಕೊಂಡು ಬಿದ್ದಿದ್ದೆ. ಇನ್ನೇನು ಮುಂಜಾನೆಯ ಇಬ್ಬನಿಯಲ್ಲಿ ಕರಗಿ ಭೂಮಿಯೊಳಗೆ ಇಳಿದು ಬಿಡುವ ಅಂತ ಲೆಕ್ಕ ಹಾಕಿದ್ದೆ. ಅದ್ಯಾಕೋ ಹೊತ್ತು ತಂದೆ ನನ್ನ ಇಲ್ಲಿಗೆ' ಎಂದಿತು ಆ 'ಪದ'.

'ಓಹೋ, ನೀನಾ, ಅದೇ ಆ ಎಲೀಟ್ ಪಬ್ ಪಕ್ಕ ಬಿದ್ದಿದ್ದವನು ತಾನೇ...' ಎಂದ ಬೈರಾಗಿ. ತನ್ನ ಮನದೊಳಗೆ ಹಕ್ಕಿಗಳ ಹಾಗೆ ಹಾರುತ್ತಿದ್ದ ಭಾವನೆಗಳ ಕಲರವ ಒಂದಿನತು ಹೊರಗೆ ಬರಗೊಡದೆ ನಿರ್ಭಾವುಕ ದನಿಯಲ್ಲಿ ಆ ಮಾತು ಉದುರಿಸಿದ್ದ. 'ಅಲ್ಲ, ನೀನು ಮಣ್ಣಲ್ಲಿ ಕರಗಿ ಹೋಗೋನೇ ಆಗಿದ್ದರೆ ನನ್ನ ಕಾಲಿಗೆ ಯಾಕೆ ತೊಡರಿಕೊಂಡೆಯೋ' ಎಂದು ಅದೇ ಉಸಿರಿನಲ್ಲಿಯೇ ಉಲ್ಟಾ ದಬಾಯಿಸಿಯೂ ಬಿಟ್ಟ.

ಇವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನೇಸರ ಮೂಡುವ ಮುಂಚೆ ಪಶ್ಚಿಮದಲ್ಲಿ ಜಾರಿಕೊಳ್ಳ ಬೇಕಿದ್ದ ಮೌನವೊಂದು ಹಾಗೇ ಅಲ್ಲಿಯೇ ನಿಂತುಬಿಟ್ಟಿತು. ಅದನ್ನು ನೋಡಿದವನೇ "ಹಚಾ'' ಎಂದು ಓಡಿಸಿದ ಬೈರಾಗಿ ಅಸಲಿ ಹಕೀಕತ್ತು ಶುರುವಿಟ್ಟ..

'ನೋಡು ವಿಷಯ ಇಷ್ಟೇ, ನನ್ನದೊಂದು ಕಾವ್ಯ ಇದೆ. ಅದು ನನ್ನ ಬದುಕಿಗಿಂತ ದೊಡ್ಡದು. ನಿಜ ಹೇಳಬೇಕೆಂದರೆ ಅದೊಂದು ಕಾವ್ಯವ ಅಂತರ್ಗತಗೊಳಿಸಿಕೊಳ್ಳಲು ನೂರಾರು ಜನುಮ ಕಾದಿದ್ದೇನೆ. ಈಗ ಎಲ್ಲವೂ ಒಂದು ಹಂತಕ್ಕೆ ಬಂದದ್ದಾಗಿದೆ ಆದರೆ ನನ್ನನ್ನು ಮೀರಿ ನಿಂತಿರುವ ಆ ಕಾವ್ಯಕ್ಕೆ ಕಡೆಯದಾಗಿ ನಶೆಯ ಲಹರಿ ಬೇಕು. ಎಂಥ ನಶೆ ಬೇಕು ಎಂದರೆ ಅಲ್ಲಿ ಪ್ರಜ್ಞೆ ಕರಗಿ ಹೋಗಬೇಕು, ಚಿಂತನೆ ಚಿಲುಮೆಯಾಚೆಗೆ ನಿಲ್ಲಬೇಕು. ಅಲ್ಲಿ ಏನಿದ್ದರೂ ಅಲ್ಲಮನ ಬಯಲೂ, ಬುದ್ಧನ ಭಾವವೂ, ಶಕ್ತಿಶಿವರ ಕದಲದ, ಕದಡದ ಅಖಂಡ ಏಕಭಾವ ಬಿಂದುವೂ ಇರಬೇಕು' ಅಂದ.

ಪಕ್ಕದಲ್ಲಿ ಹೊರಳಾಡುತ್ತಿದ್ದ ಆ ಮಾಸಿದ್ದ ಪದ ಏನೂ ಮಾತನಾಡಲಿಲ್ಲ. ಇದನ್ನು ನೋಡಿ, ಮನದಲ್ಲೇ ಶಿವಶಕ್ತಿಯರ ಬಿಂದುವಿನ ಚಕ್ರ ಬಿಡಿಸುತ್ತಾ ಹೇಳಿದ, "ನೋಡು, ನಶೆ ಎಂದರೆ ಅದು ಅಂತಿಂಥ ನಶೆಯಲ್ಲ. ಆ ನಿನ್ನೊಡತಿ ತನ್ನೊಳಗೆ ತುಂಬಿಕೊಳ್ಳುತ್ತಿದ್ದಳಲ್ಲ ಅಂಥ ನಶೆ. ಅಂಥದ್ದೊಂದು ನಶೆಯಲ್ಲೇ ಮಿಂದ ನಂತರವೇ ತಾನೇ ಆಕೆ ನಿನ್ನ ತುಳುಕಿಸಿ ಹೋದದ್ದು. ಅದಕ್ಕೆ ತಾನೇ ನೀನು ಮೈತುಂಬಾ ಮತ್ತು ಹೊದ್ದುಕೊಂಡು ಬಿದ್ದಿರುವುದು. ನಿನ್ನೊಳಗೆ ಭೂತ, ಭವಿಷ್ಯ, ವರ್ತಮಾನ ತಟಸ್ಥವಾಗಿದೆ. ಎಲ್ಲವೂ ನಿನ್ನೊಳಗೆ ಕುಸಿದು, ಕುಸಿದು ಕೃಷ್ಣನಾಗಿದೆ. ಕೃಷ್ಣ, ಮಹಾ ಕೃಷ್ಣ ಎಲ್ಲವನ್ನೂ ಕರಗಿಸಿಕೊಳ್ಳುವ, ಕರಗಿಸಿ ಅರಗಿಸಿಕೊಳ್ಳುವ ಮಹಾಕಾಲ. ಆ ಮಹಾಕೃಷ್ಣವೇ ವೇದಿಕೆ ಶಿವಶಕ್ತಿಯರು ಬಿಂದುವಾಗಲು. ಅಂಥದ್ದೊಂದು ಲೋಕೋತ್ತರ ನಶೆ ನಿನ್ನೊಳಗೆ ಇದೆ. ಅದಕ್ಕೆ ನಿನ್ನ ಹೊತ್ತು ತಂದೆ' ಅಂದ.

ಪಕ್ಕದಲ್ಲಿನ ಪದ ತೊದಲುತ್ತಾ ತುಸು ಗಟ್ಟಿಯಾಗಿ ಒದರಿತು, "ಲೇ ಬೈರಾಗಿ, ಚಿಲುಮೆ ಸೇದಿ ಗಡದ್ದಾಗಿ ಏಳೆಂಟು ಲೋಕ ಸುತ್ತಿ ಬರೋ ನಿನಗೆ ಅದ್ಯಾಕೋ ಬೇಕು ನಶೆ. ನೋಡು, ನಶೆ ನನ್ನೊಳಗಿಲ್ಲ. ನಾನು ನಶೆಯೊಳಗಿದ್ದೇನೆ. ನಶೆಯೊಳಗೆ ಇದ್ದವರಿಗೆ 'ನಾನು' ಎಂಬುದು ಇಲ್ಲ. ಹಾಗಾಗಿ ನಿಜ ಹೇಳಬೇಕೆಂದರೆ ಇಲ್ಲಿ ನಾನಿಲ್ಲ. ಇರುವುದೆಲ್ಲವೂ ನಶೆ ಮಾತ್ರ. ಅದು ನನ್ನೊಡತಿಯ ಅನುಗ್ರಹದ ಫಲ. ಅವಳ ಲಹರಿ'.

ಇಷ್ಟು ಹೇಳಿ ಮತ್ತೆ ಮಗ್ಗಲು ಬದಲಿಸುತ್ತಾ, ಮೈ ತುಂಬಾ ಮೆತ್ತಿಕೊಂಡಿದ್ದ ಧೂಳಿನ ಪರಿವೇ ಇಲ್ಲದೆ ಉಸುರಿತು, "ಮಧುಶಾಲೆಯಲ್ಲಿ ಮೀಯುತ್ತಾ ಕಣ್ಣಲ್ಲೇ ಕಾವ್ಯ ತುಳುಕಿಸುವ ರಸಿಕಳು ನನ್ನೊಡತಿ. ಅವಳದೊಂದು ಸಾಲಿಗೆ ಮತ್ತೆ, ಮತ್ತೆ ಹೊತ್ತಿ ಉರಿಯುವ ಹೃದಯಗಳೆಷ್ಟೋ... ಪ್ರತಿ ಬಾರಿ ಹೃದಯವೊಂದು ಹೊತ್ತಿ ಉರಿವಾಗಲೂ ಅದರಳೊಗಿನ ಪರಿಶುದ್ಧ ಭಾವವ ದಿಟ್ಟಿಸುತ್ತಾಳೆ. ತನ್ನ ರತಿ ದೇಹದೊಳಗಿನ ತಿದಿಯೊತ್ತಿ ಆತ್ಮದ ಕುಲುಮೆಯಿಂದ ಭಾವಗಳ ಸಾಚಾತನ ನೋಡುತ್ತಾಳೆ. ಅವಳ ಆತ್ಮದ ತಹತಹಕ್ಕೆ ಪರಿಶುದ್ಧ ಭಾವದ ಹವಿಸ್ಸೇ ಬೇಕು. ಅವಳ ಮನೋಯಜ್ಞದಲ್ಲಿ ಅವು ಅಂತಿಮವಾಗಿ ಹೊಳೆಯಬೇಕು' ಎಂದಿತು.

ಬೈರಾಗಿ ತನ್ನ ಆತ್ಮವನ್ನೂ ಕಿವಿಯಾಗಿಸಿಕೊಂಡು ಕೇಳುತ್ತಿದ್ದ. ಆ ಪದ ಮುಂದುವರೆಯಿತು, "ಜೀವ ಕನ್ನಿಕೆ ಸೃಷ್ಟಿ ಕಟ್ಟುವುದು ಇಟ್ಟಿಗೆಯಿಂದ ಅಲ್ಲ ಕಣೋ ಬೈರಾಗಿ, ಶೂನ್ಯದೊಳಗೆ ದಹಿಸಿ ಹೊರಬಿದ್ದ ಶುದ್ಧ ಭಾವದಿಂದ' ಅಂದಿತು.

ಇಂಥದ್ದೊಂದು ಮಾತಿಗಾಗಿ ಅದೆಷ್ಟು ಸಾವಿರ ವರುಷದಿಂದ ತಹತಹಿಸಿದ್ದನೋ ಬೈರಾಗಿ. ಮೆತ್ತಗೆ ತನ್ನ ಎದೆಯ ತಿದಿ ಒತ್ತಿ ಮಾತೆಂಬೋ ಮಾತುಗಳ ಮೂಡಿಸತೊಡಗಿದ, " ಅದೆಲ್ಲ ನನಗೆ ಗೊತ್ತು ಅದಕ್ಕೇ ನಿನ್ನ ಹೊತ್ತು ತಂದಿರೋದು... ನಿನ್ನೊಡತಿಯ ಮುಂದೆ ನಾನು ಯಾವತ್ತೂ ಮಂಡಿಯೂರಿ ಕುಳಿತಿರುತ್ತಿದ್ದೆ' ಎಂದು ಕಾಲಚಕ್ರದಲ್ಲಿ ಹಿಂದೆ ಸರಿದ. ಬೈರಾಗಿಯ ಮಾತಿನಿಂದ ಕಕ್ಕಾಬಿಕ್ಕಿಯಾಯಿತು ಪದ. ಎಲ್ಲಿಯ ನನ್ನೊಡತಿ, ಎಲ್ಲಿಯ ಬೈರಾಗಿ ಎಂದು ಲೆಕ್ಕ ಶುರುವಿಟ್ಟುಕೊಂಡಿತು.

ಇದರ ಪರಿವೆ ಇಲ್ಲದೆ ಬೈರಾಗಿ ಮುಂದುವರೆಸಿದ, ಅದೊಂದು ದಿನ ಅವಳ ಮುಂದೆ ಎಂದಿನಂತೆ ಮಂಡಿಯೂರಿ ಕುಳಿತಿದ್ದೆ. ಮಧುವಿನ ಹನಿಯೊಂದರ ಸಂಗಡ ಲಾಸ್ಯವಾಡುತ್ತಾ, ತೆಳುವಾಗಿ ಅದರಳೊಗಿನ ಮರ್ಮವ ಆತ್ಮಕ್ಕೆ ಹನಿಸಿಕೊಂಡಳು. ನಂತರ ಮಧುವಿನ ಬಟ್ಟಲು ಪಕ್ಕಕ್ಕಿಟ್ಟು ತಾನು ಈ ಲೋಕಕ್ಕೆ ಸೇರಿದವಳೇ ಅಲ್ಲವೇನೋ ಎನ್ನುವಂತೆ ನಿರ್ಲಿಪ್ತವಾಗಿ ಕೇಳಿದಳು,.. 'ಅದೆಷ್ಟು ಪ್ರೇಮಿಸಬೇಕು ಅಂತಾ ಇದ್ದೀಯ ನನ್ನನ್ನು' ಎಂದು.

'ನಾನೇ ನೀನಾಗುವಷ್ಟು' ಎಂದೆ,

'ಆಮೇಲೆ' ಎಂದಳು.

ಅವಳ ಮೊಗವನ್ನೇ ದಿಟ್ಟಿಸುತ್ತಿದ್ದೆ..

ಅವಳೇ ಮುಂದುವರೆದು ಕೇಳಿದಳು 'ನೀನು ನಾನಾದ ಮೇಲೆ ಮುಂದೇನು?',

'ನಿನ್ನೊಳಗಿನ ನೀನು ಕರಗಿ ಕಡೆಗೆ ಶೂನ್ಯವಾಗುವುದು' ಅಂದೆ.

"ಆಯಿತು' ಎಂದಳು.

ನನ್ನ ಕಣ್ಣನ್ನೇ ದಿಟ್ಟಿಸಿದಳು. ನಾನು ಹಾಗೇ ಅವಳ ಕಣ್ಣೊಳಗೆ ಇಳಿಯುತ್ತಾ ಹೋದೆ. ಕೈ ಹಿಡಿದು ಅಂತರಂಗಕ್ಕೆ ಕರೆದೊಯ್ದಳು, ಆತ್ಮದೊಳಗೆ ಬೆರೆಸಿಕೊಳ್ಳುತ್ತಾ ಕೇಳಿದಳು, 'ನನ್ನೊಳಗೆ ನೀನು ಕರಗಿ, ಆಮೇಲೆ ನಾನೂ ಕರಗಿ ಕಡೆಗೆ ಶೂನ್ಯವಾಗಿ ಹೋದ ಮೇಲೆ ಉಳಿಯುವುದೇನೋ ಹುಡುಗ?'

'ನಿನ್ನಾಣೆಗೂ ಗೊತ್ತಿಲ್ಲ, ಅದನ್ನೆಲ್ಲಾ ನೀನೇ ಹೇಳಬೇಕು, ಆ ಪ್ರಶ್ನೆಗಳನ್ನು ಕೇಳುವುದಿರಲಿ ಅದನ್ನು ಯೋಚಿಸಿದರೂ ನನಗೆ ಗೊಂದಲವಾಗುತ್ತೆ' ಎಂದೆ.

ತನ್ನ ಆತ್ಮದ ಆಳಕ್ಕೆ ಕರೆದುಕೊಳ್ಳುತ್ತಾ ಹೇಳಿದಳು, 'ದಡ್ಡ, ಶೂನ್ಯದಲ್ಲಿ ಗೊಂದಲವೆಲ್ಲೋ ಇರುತ್ತೆ, ಅಲ್ಲಿ ಎಲ್ಲವೂ ತುಂಬಿರುತ್ತೆ'. ನನಗೆ ಅರ್ಥವಾಗದು ಎಂದು ಅರಿತು, ತನ್ನ ಆತ್ಮದೊಳಗೆ ಪರಿಪೂರ್ಣವಾಗಿ ನಾನು ಹರವಿಕೊಳ್ಳಲು ಬಿಟ್ಟು ಬೆಚ್ಚಗೆ ಹೇಳಿದಳು, 'ನೋಡು ಎಲ್ಲವೂ ತುಂಬಿರುತ್ತೆ ಅಂದರೆ ಅದರ ಅರ್ಥ ಅಲ್ಲಿ ಏನೂ ಇಲ್ಲ ಎಂತಲೇ. ಏನೂ ಇಲ್ಲ ಎಂದರೆ ಅದು ಪರಿಪೂರ್ಣವೆಂದೇ... ಹಾಗಾಗಿ ಅಂಥ ಪರಿಪೂರ್ಣತೆ ಏಕಕಾಲಕ್ಕೆ ನಿಶ್ಚಲವೂ, ಚೈತನ್ಯಶೀಲವೂ ಆಗಿರುತ್ತೆ. ಸಂಭವ, ಅಸಂಭವ ಎರಡೂ ಅಲ್ಲಿ ಒಟ್ಟಿಗೇ ಇರುತ್ತವೆ' ಎಂದಳು.

ನಾನು ಪೆದ್ದಾಗಿ ನೋಡುತ್ತಿದ್ದೆ. 'ಹೋಗಲಿ ಬಿಡು... ಅನುಭವಕ್ಕೆ ವಿವರಣೆಯ ಅಗತ್ಯವಿಲ್ಲ. ಅನುಭವಿಸಿದ ಮೇಲೆ ವಿವರಣೆ ಬೇಕಿಲ್ಲ. ಮುಂದೆ ನಿನಗೇ ತಿಳಿಯುತ್ತದೆ' ಎಂದಳು.
ಹಾಗೆ ಅವಳ ಅತ್ಮದೊಳಗೆ ನನ್ನ ಬೆರೆಸಿಕೊಂಡ ಮೇಲೆ ಕಾಲ ನಿಂತು ಹೋಯಿತು. ಯುಗಯುಗಳೇ ಗತವಾದವು. ಹೀಗೆ ಅದೆಷ್ಟು ಕಾಲ ಸಂದಿತ್ತೋ... ಒಂದು ದಿನ ಇದ್ದಕ್ಕಿದ್ದಂತೆ ಹೇಳಿದಳು, 'ಸಾಕು, ಹೊರಡು, ಕೆಲಸ ಮಾಡುವುದಿಲ್ಲವೇನು?' ಎಂದು.

'ಯಾಕೆ' ಅಂದೆ,

'ಅಯ್ಯೋ, ಅರಸಿಕ, ಹೋಗಿ ಮತ್ತೊಂದಿಷ್ಟು ನಶೆ ತೆಗೆದುಕೊಂಡು ಬಾ... ಭಾವದ ನಶೆ, ಅನುಭಾವದ ನಶೆ, ಅದ ಕರಗಿಸಿ ಮತ್ತೆ ಶೂನ್ಯವಾಗೋಣ' ಎಂದಳು.

'ಹೇಗೆ?' ಅಂದೆ.

'ಅಕ್ಷರದಾಚೆಗೆ ನಿಂತ, ಕಿವಿಗಳಿಗೆ ದಕ್ಕದ, ಸದಾ ಮನದೊಳಗೆ ಜಿನುಗುವ ಕಾವ್ಯ ತಾ' ಅಂದಳು. ಸರಿ ಎಂದು ಹೊರಟೆ. ಅವಳ ಆತ್ಮದಿಂದ ನನ್ನನ್ನು ಕಡ ಪಡೆದು ಹೊರಬಿದ್ದೆ. ಅಲೆದೆ, ಅಲೆದೆ... ಅಂಥದ್ದೊಂದು ಕಾವ್ಯ ಎಲ್ಲಿಂದ ತರಲಿ, ಅದ್ಹೇಗೆ ಸೃಷ್ಟಿಸಲಿ ಎಂದು. ಕಡೆಗೊಂದು ದಿನ ಅರಿವಾಯಿತು, 'ನಾನು ಅವಳಾದ ಮೇಲೆ ಕಾವ್ಯ ಹೊರಗೆ ಎಲ್ಲಿ ತಾನೇ ಇರುತ್ತೆ? ಅದು ಇರುವುದು ನಮ್ಮೊಳಗೆ... ಆ ನಮ್ಮೊಳಗಿನ ಕಾವ್ಯ ಪದವಾಗಿ ಅಕ್ಷರದಲ್ಲಿ ಸ್ಥಾಯಿ ಆಗುವ ಮುನ್ನ ಬರಿದೆ ಭಾವದ ಕಾವ್ಯ ಕಟ್ಟಬೇಕು. ಅದುವೇ ಅಕ್ಷರದಾಚೆಗೆ ನಿಂತ, ಪದಗಳಾಗದ, ಕಿವಿಗಳಿಗೆ ದಕ್ಕದ ಶುದ್ಧ ಭಾವದ ನಿಶ್ಶಬ್ಧ ಕಾವ್ಯ... ಭಾವನೆಗಳು ಪದವಾಗಿ ಶಬ್ಧವಾಗುವ ಮುನ್ನವೇ ಕಾವ್ಯ ಕಟ್ಟಿದೆ... ಅವಳ ಎದೆಯೊಳಗೆ....'' ಎಂದು ಹೇಳಿ ಬೈರಾಗಿ ಮಾತು ನಿಲ್ಲಿಸಿದ.

'ಅಲ್ಲಾ ಬೈರಾಗಿ, ಹಾಗಾದರೆ ಆ ಶಬ್ದವಲ್ಲದ ಕಾವ್ಯಕ್ಕೆ ಶಬ್ದವಾಗಿ ಹೊಮ್ಮಿ, ಪದವಾಗಿ ಬಿದ್ದು ಮಣ್ಣಲ್ಲಿ ಹೊರಳಿರುವ ನಾನು ಮೈಲಿಗೆಯಲ್ಲವೇ? ನನ್ನನ್ನೇಕೆ ತಂದೆ?' ಎಂದಿತು ಆ ಪದ.

ಬೈರಾಗಿ ನಿಧಾನವಾಗಿ ಹೇಳಿದ, 'ಶಬ್ಧವಾಗದ ಕಾವ್ಯಕ್ಕೆ ನಶೆ ಬರುವುದು ನಿನ್ನಿಂದಲೇ.. ಅವಳ ಅಧರದಿಂದ ಮತ್ತಾಗಿ ಇಳಿದ ನಿನಗೆ ಯಾವುದೇ ಅರ್ಥದ ದಾಸ್ಯ ಇಲ್ಲ.... ನೀನೇ ಹೇಳಿದಂತೆ ನಶೆ ನಿನ್ನೊಳಗಿಲ್ಲ, ನೀನು ನಶೆಯೊಳಗೆ ಇರುವೆ. ಹಾಗಾಗೇ ಅರ್ಥ ಮೀರಿದ ಅವಿರತ ಕಾವ್ಯಕ್ಕೆ ನೀನೇ ಶೀರ್ಷಿಕೆ'

ಒಂದಷ್ಟು ಹೊತ್ತು ಅಲ್ಲಿ ಮೌನವೇ ಮೌನ ತುಂಬಿತ್ತು.

ಬೈರಾಗಿ ಮೆಲ್ಲನೆ ಮತ್ತೊಂದು ಮಾತು ಹೇಳಿದ್ದು ಪಕ್ಕದಲ್ಲಿನ ಪದಕ್ಕೆ ಕೇಳಿಸಲೇ ಇಲ್ಲ.

'ನಾನೇ ಅವಳಾದ ಮೇಲೆ ಅವಳಿಗೆ ಅರ್ಪಿಸಲು ಉಳಿವುದಾದರೂ ಏನು? ಅವಳಿಗೆ, ಅವಳೇ ಅರ್ಪಣೆ' ಎಂದಿದ್ದ ಅವ.

ಅಲ್ಲಿಗೆ ಯುಗಯುಗಾಂತರದ ನಂತರ ಮತ್ತೊಂದು ನಿಹಾರಿಕಾ ವಸಂತ ಮೈದಳೆವ ಕ್ಷಣ ಸನ್ನಿಹಿತವಾಗಿತ್ತು. ಶಿವಶಕ್ತಿಯರ ಸಮ್ಮಿಳನಕ್ಕೆ ಕಾತರಿಸಿ ಆಗಸದ ತುಂಬಾ ಹರಡಿಕೊಂಡಿದ್ದ ಚುಕ್ಕಿಗಳು ಮೈ ನೆರೆದವು.....

ಚಿತ್ರಕೃಪೆ: ಕಿರಣ್ ಮಾಡಾಳ್

Thursday, August 12, 2010

ನನ್ನೊಳಗಿನ ನೀನು ಮತ್ತು ನಾನು

1

ನನ್ನೊಳಗೆ ನೀನು ಯಾವತ್ತೂ ಉಳಿದಿರುವೆ,

ನಾ ಕರಗಿ ಹೋದ ಮೇಲೂ...

ಏಕೆಂದರೆ

ನೀ ನನ್ನ ನಿಜ ಅಸ್ತಿತ್ವ



2

ನಿನ್ನೊಳಗೆ ನಾನು ಇರಲೇಬೇಕೆಂಬ

ಹಂಬಲ ಇಲ್ಲ, ಹಠವೂ ಇಲ್ಲ...

ಉಳಿಸಿಕೊಂಡರೆ ಉಸಿರಾಗುವೆ

ಉಳಿಸದೆ ಹೋದರೆ

ಮರೆವೆಂಬ ಊರಲ್ಲಿ ಮರೆಯಾಗುವೆ

ಹಾಗೇ ಒಂದು ಕಥೆ

ಬ್ರಹ್ಮಾಂಡವೆಂಬೋ ಬ್ರಹ್ಮಾಂಡದಲ್ಲಿ ಭುವಿಯೆಂಬ ಸಣ್ಣದೊಂದು ಬಿಂದು. ಅಲ್ಲೋ ಪಿತಗುಟ್ಟುವಷ್ಟು ಜನ, ಮನುಕುಲವೆಂದು ಕರೆದುಕೊಂಬರು ತಮ್ಮನ್ನು ಅವರು. ಆ ಮನುಕುಲಕ್ಕೆ ಇತಿಹಾಸವೆಂಬೋ ಇತಿಹಾಸವೂ, ಭವಿಷ್ಯವೆಂಬೋ ಭವಿಷ್ಯವೂ ಉಂಟು. ಆದರೆ ಅವರೆಲ್ಲಾ ವರ್ತಮಾನದಲ್ಲೇ ಫುಲ್ ಬಿಜಿ... ಇತಿಹಾಸವನ್ನು ಕಾಣುವ ಒಳಗಣ್ಣಾಗಲಿ, ಭವಿತವ್ಯವ ದಿಟ್ಟಿಸುವ ದೃಷ್ಟಿಯಾಗಲಿ ಬಹುತೇಕ ನಶಿಸಿದೆ.

ಇಂತಿಪ್ಪ ಮನುಕುಲದ ಇತಿಹಾಸ, ವರ್ತಮಾನವನ್ನು ಯಾವನೋ ಪರದೇಶಿ ಕೆದಕಲಾಗಿ ಕಂಡದ್ದಾದರೂ ಇಷ್ಟು:
ಪ್ರೀತಿಸುವವರಿಗೆ ಹತ್ತಿರವಾಗದ, ಕಾತರಿಸಿದವರೊಡನೆ ಕೂಡಲಾಗದ, ಬಯಸಿದವರನ್ನು ಪಡೆಯಲಾಗದ ಅಸಹಾಯಕವೂ, ಗೊಂದಲಮಯವೂ ಆದ ಜೀವನ ಅಲ್ಲಿ ಬಹುಪಾಲು ಜನರದ್ದು. ಪ್ರೀತಿಸಿ, ಕಾತರಿಸಿ, ಬಯಸಿ ಪಡೆದವರು ಕೆಲ ಮಂದಿ, ಅವರದೋ ಧನ್ಯತಾಭಾವ... ಉಳಿದಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅನುಭವಿಗಳು, ಅನುಭಾವಿಗಳು, ಅವರಂತು ಅವನ್ಯಾರೋ 'ಭಗವಂತನೆಂಬ ಭಗವಂತನು' ಕೊಟ್ಟದ್ದ ಪಡೆದು ಗೊಂದಲಗಳಿಂದ ದೂರವೇ ಉಳಿದವರು... ಹೀಗಾಗಿ ಈ ಎಲ್ಲ ಮಂದಿಗೆ ಅವರವರದೇ ಆದ ಸತ್ಯಗಳು...

ಫ್ಲ್ಯಾಶ್ ಬ್ಯಾಕ್ ನಲ್ಲೂ ಫಾಸ್ಟ್ ಫಾರ್ವರ್ಡ್ ನಲ್ಲೂ, ಸ್ಲೋ ಮೋಷನ್ನಲ್ಲೂ, ನಾರ್ಮಲ್ ಮೋಡ್ನಲ್ಲೂ ಅಲ್ಲಿ ಯಾವಾಗಲೂ ಇದೇ ಕಥೆ..

ಇದರಿಂದಾಗಿ ಅಲ್ಲಿ ಒಟ್ಟೊಟ್ಟಿಗೇ ತಾಳ್ಮೆಯೂ, ಅಸಹನೆಯೂ, ಗೊಂದಲ, ಧ್ಯಾನ, ಹಿಂಸೆ, ಶಾಂತಿ, ಕೊಲೆ, ಸುಲಿಗೆ, ವಂಚನೆ, ಕ್ರೌರ್ಯ, ಮದ, ಮತ್ಸರ, ಪ್ರೀತಿ, ಮೋಹ, ಪ್ರೇಮ, ಕಾಮ, ಲಾಂಗು, ಮಚ್ಚು, ಕಾರತೂಸಿನ ಹೊಗೆ, ಕೆಂಪು ಗುಲಾಬಿ, ಬಿಳಿ ಪಾರಿವಾಳ ಮತ್ತೆ ಕೆಲ ದೇವತೆಯರು ಅವರ ಆರಾಧಕರೂ ಇದ್ದರು....

ಇದೆಲ್ಲ ಕಾರಣದಿಂದ ಮನುಕುಲವೆಂಬ ಕುಲದ ಕಥೆಯು ಏಕಕಾಲಕ್ಕೆ ಅಸಹನೀಯವೂ, ಆದರಣೀಯವೂ, ದಾರುಣವೂ, ಪ್ರೀತಿಪೂರ್ವಕವೂ ಆಗಿತ್ತೆಂಬುದು ಕಂಡು ಬಂದಿತೆಂಬಲ್ಲಿಗೆ ಪರಿಸಮಾಪ್ತಿ.

-------ಓಂ ಜನಗಣ ಮನ ಢಣಢಣ ಭಣಭಣ....-----------

Thursday, July 1, 2010

ನಿ'ವೇದನೆ'

ಕವಿತೆಯೊಂದು ತೀರಾ ಖಾಸಗಿಯಾಗಿತ್ತು,
ಅದೇಕೋ ಜನರ ಬಾಯಿಗೆ ಬಿದ್ದು ಗದ್ದಲವಾಗಿ ಹೋಯ್ತು....

Wednesday, February 24, 2010

'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'......

'ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ'.....ಹೀಗೊಂದು ಕಾಗದ ಬಂದಿತ್ತು ನೋಡಿ ನನಗೆ. ಅದರಲ್ಲಿ 'ಇಲೆಕ್ಟ್ರಾನಿಕ್' ಎಂದು ಇರಲಿಲ್ಲ, 'ಇಲೆಕ್ಟಾನಿಕ್' ಎಂದೇ ಇತ್ತು, 'ಅಂಗಡಿಯವರು' ಎನ್ನುವದು 'ಅಂಗಡಿವರು' ಆಗಿತ್ತು ... ಸುಮಾರು 20 ವರ್ಷದ ಕೆಳಗೆ ಬಂದಿದ್ದ ಕಾಗದ ಅದು. ಕಾಗದ ಬರೆದಾತ ಬಾಲ್ಯ ಕಾಲದ ಗೆಳೆಯ. ಅದುವೇ ಅವನು ನನಗೆ ಬರೆದ ಮೊದಲ, ಕೊನೆಯ ಪತ್ರ. ನೆನಪಿನ ಪುಟದಲ್ಲಿ ಅವನ ಹೆಸರು ಎಂದೋ ಮಸುಕಾಗಿ ಹೋಗಿದೆ. ಎಷ್ಟೋ ಸಾರಿ ನನಗೆ ಅನಿಸಿದ್ದಿದೆ, ಕಡೇ ಪಕ್ಷ ಈ ನೆನಪುಗಳು ಎಂದು ಮಾಸುತ್ತವೆ, ಅವುಗಳ ಎಕ್ಸ್ಪೈರಿ ಡೇಟ್ ಯಾವತ್ತು ಅನ್ನೋದು ಏನಾದರೂ ಗೊತ್ತಾದರೆ ಅದರ ಮೇಲೆ ಕುಳಿತ ಕಸ ಕೊಡವಿ ಮತ್ತೊಂದಿಷ್ಟು ದಿನ ಜತನ ಮಾಡಬಹುದೇನೋ ಎಂದು. ಇರಲಿ ಬಿಡಿ, ಅಂದಹಾಗೆ ಕಾಗದ ಬರೆದ ಆ ನನ್ನ ಗೆಳೆಯನ ಹೆಸರು ಯೋಗೀಶ ಅಂತಲೋ ಅಥವಾ ಪ್ರಹ್ಲಾದ ಎಂದೋ ಇರಬೇಕು. ನಿಖರವಾಗಿ ಹೇಳಲಾರೆ. ಆತ ನನ್ನ ಬದುಕಿನ ಆವರಣವನ್ನು ಎಂದೂ ತಟ್ಟದ ಊರೊಂದರ ಒಂದು ಕಾಲದ ಗೆಳೆಯ ಅಂಥ ಹೇಳಬಹುದು.

ಹೌದು, ಆ ಊರು ನನ್ನನ್ನು ಎಂದಿಗೂ ತಟ್ಟಲಿಲ್ಲ. ಕೆಲ ಕಾಲ ನಾವು ಆ ಊರಿನಲ್ಲಿದ್ದೆವು ಎನ್ನುವುದಷ್ಟೇ ನಿಜ. ಅಲ್ಲಿಗೆ ಹೋದ ಮೊದಲ ದಿನದಿಂದಲೂ ಆ ಊರು ನನಗೆ ಸೇರಲಿಲ್ಲ. ವೈರುಧ್ಯ ಅಂದರೆ ಆ ಊರಿನ ಶಾಲೆಗೆ, ಅಲ್ಲಿನ ಸಹಪಾಠಿಗಳಿಗೆ ನಾನು ಬಹುವಾಗಿ ಸೇರಿಬಿಟ್ಟಿದ್ದೆ. ಬುದ್ಧಿವಂತ ಎನ್ನುವ ವಿಶೇಷಣ ಬೇರೆ! ನನ್ನ ಬಗ್ಗೆ ನನಗೆ ಸ್ವಲ್ಪ ಕೆಡುಕೆನಿಸಿದರೂ ನಿಮಗೆ ಒಂದು ವಿಷಯ ಹೇಳಲೇ ಬೇಕು, ಆ ನನ್ನ ಸಹಪಾಠಿಗಳಿಗೆ ನಾನು ಎಷ್ಟು ಹಿಡಿಸಿದ್ದೆ ಅಂದರೆ ಮುಂದೆ ಆ ಊರು ಬಿಟ್ಟು ದೂರದ ನಗರಕ್ಕೆ ಬಂದ ಮೇಲೂ ನನ್ನ ಶಾಲೆಯ ವಿಳಾಸವನ್ನು ಹೇಗೋ ಪತ್ತೆ ಮಾಡಿದ ಅವರೆಲ್ಲಾ ನನಗೆ ಕಾಗದವನ್ನು ಬರೆದೇ ಬರೆದರು... ಒಂದು ನೂರೈವತ್ತು ಇನ್ನೂರು ಕಾಗದಗಳಾದರೂ ಆಗ ನನಗೆ ಬಂದಿರಬಹುದು. ಮೇಲೆ ಹೇಳಿದ ಕಾಗದ ಸಹ ಹಾಗೇ ಬಂದಿದ್ದು. ಆದರೆ, ಆ ಊರು ನನಗೆ ಎಷ್ಟು ಹಿಡಿಸಿರಲಿಲ್ಲ ಎಂದರೆ ಹಾಗೆ ಬಂದ ಒಂದೇ ಒಂದು ಕಾಗದಕ್ಕೂ ನಾನು ಉತ್ತರಿಸಿರಲಿಲ್ಲ..

ನಮ್ಮ ತಂದೆಯ ವರ್ಗವಾದ ಕಾರಣ ನಾವು ಆ ಊರಿಗೆ ಹೋಗಿ ನೆಲೆಸಿದ್ದೆವು. ಆ ಊರಿಗೆ ಹೋದ ಮೊದಲನೇ ದಿನದಿಂದಲೂ ನಾನು ಕಾತರಿಸಿದ್ದು ಆ ಊರನ್ನು ಬಿಡುವ ಕೊನೆಯ ದಿನಕ್ಕಾಗಿ ಎನ್ನಬಹುದು. ಅತ್ತ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಊರು ಅದು.

ಅದೇಕೋ ತೀರಾ ಎಳೆವೆಯಲ್ಲಿ ನನ್ನ ಮನಸ್ಸಿಗೆ ಹಳ್ಳಿಗಳು ಹಿಡಿಸಿರಲೇ ಇಲ್ಲ. ಅದು ಅಕಾರಣವೋ, ಸಕಾರಣವೋ ಗೊತ್ತಿಲ್ಲ. ಈಗ ಹಿಂತಿರುಗಿ ನೋಡಿದರೆ ಬಹುಶಃ ನನ್ನನ್ನು ಹಳ್ಳಿಗಳಿಗೆ ರಿಲೇಟ್ ಮಾಡಿಕೊಳ್ಳುವ ಬದುಕಿನ ಯಾವೊಂದು ಆವರಣವೂ ಆ ಹೊತ್ತು ನನ್ನಲ್ಲಿ ಇರಲಿಲ್ಲ ಅನಿಸುತ್ತೆ. ಸಕರ್ಾರಿ ನೌಕರಿಯ ವಗರ್ಾವಗರ್ಿಗೆ ಸಿಕ್ಕು ಯಾವುದೋ ಒಂದು ಹಳ್ಳಿಗೆ ಹೋದ ಕುಟುಂಬ ನಮ್ಮದು. ಆಗಿನ ನನ್ನ ಮನಸ್ಥಿತಿ ಅನುಸರಿಸಿ ಹೇಳುವುದಾದರೆ ನಾನು ಹುಟ್ಟಿದ ಪಟ್ಟಣದಿಂದ ಕನಸಿದ ಬೆಂಗಳೂರಿಗೆ ಸಾಗಿ ಬರುವ ಹಾದಿಯಲ್ಲಿ ಅನಿವಾರ್ಯವಾಗಿ ಬಂದ ಸ್ಟಾಪ್ ಅದು. ಬೇಕೆಂದರೂ, ಬೇಡವೆಂದರೂ ಕೆಲ ಹೊತ್ತು ಇದ್ದು ಸಾಗಲೇ ಬೇಕಾದ ಇಷ್ಟವಾಗದ ತಂಗುದಾಣ. ಬಹುಶಃ ಈ ಎಲ್ಲ ಕಾರಣಗಳಿಂದಲೇ ಇರಬಹುದು ಇಂದು ನಾನು ಹಳ್ಳಿಗಳ ಬಗ್ಗೆ ಮಾತನಾಡುವಾಗ ಹಳ್ಳಿಯ ಬದುಕಿನ ಚಿತ್ರಣ ಕಂಡೆ ಎಂದಷ್ಟೇ ಧೈರ್ಯವಾಗಿ ಹೇಳಬಲ್ಲೆನೇ ಹೊರತು, ಹಳ್ಳಿಯ ಬದುಕನ್ನೇ ಕಂಡೆ ಎನ್ನುವ ಅಪ್ರಾಮಾಣಿಕತೆ ತೋರಲಾರೆ. ಅಷ್ಟೇ ಅಲ್ಲ ನನಗೆ ಭಾರತದ ಹಳ್ಳಿಗಳ ಆತ್ಮವೇನಾದರೂ ಅಲ್ಪಸ್ವಲ್ಪ ದಕ್ಕಿದ್ದರೆ ಅದು ನಗರಗಳಲ್ಲಿ ಸಿಕ್ಕ ಕೆಲ ಪ್ರಫುಲ್ಲ ದೇಸಿ ಮನಸ್ಸುಗಳಿಂದಲೇ ಹೊರತು ನನ್ನ ಬಾಲ್ಯಕಾಲದ ಹಳ್ಳಿ ವಾಸ್ತವ್ಯದಿಂದ ಅಲ್ಲ.

ನಮ್ಮ ಕುಟುಂಬ ಕೆಲಕಾಲ ಆ ಹಳ್ಳಿಯಲ್ಲೇ ಇದ್ದರೂ ನನ್ನ ಬದುಕ ಸುತ್ತವರೆದಿದ್ದು ಮಾತ್ರ ಹಳ್ಳಿಯ ಪರಿಸರವಲ್ಲ; ಬದಲಿಗೆ ಟಿವಿ, ಪೇಪರ್, ಮ್ಯಾಗಝೀನ್ಸ್ ಮತ್ತು ಪುಸ್ತಕಗಳು. ಅವುಗಳ ಮೂಲಕ ನನ್ನ ಮನೋಭಿತ್ತಿಯಲ್ಲಿ ರೂಪು ತಳೆದ ಒಂದು "ಸಿಂಥೆಟಿಕ್' ಪ್ರಪಂಚ. ಇನ್ನೂ ಮುಂದುವರೆದು ಹೇಳುವುದಾದರೆ ಮಾಧ್ಯಮಗಳ ಮೂಲಕ ಕಂಗಳಲ್ಲಿ ಬೆರಗು ಹುಟ್ಟಿಸಿ, ಲೈಫ್ಸ್ಟೈಲ್ ಬಗೆಗೆ ಎಳೆವೆಯಲ್ಲೇ ಕಾನ್ಷಿಯಸ್ ಮಾಡಿದ ಕನ್ಸೂಮರಿಸಂನ ಚಿನ್ನಾರಿ ಕನಸುಗಳ ಪ್ರಪಂಚ.

ಇತ್ತೀಚೆಗೆ ಗೆಳೆಯ ಸಂತೋಷನೊಡನೆ ಮಾತನಾಡುವಾಗ ಇದನ್ನೇ ಹೇಳಿದ್ದೆ. ಕನ್ಸೂಮರಿಸಂ ಪ್ರವರ್ತಕ ಕಂಪೆನಿಗಳು ಹೇಗೆ ಯಾವುದೇ ಸಕರ್ಾರಕ್ಕಿಂತ ಚೆನ್ನಾಗಿ ಮೀಡಿಯಾಗಳನ್ನು ಬಳಸಿ ಅನೇಕ ತಲೆಮಾರುಗಳ ತಲೆ ಬೋಳಿಸಿ ತಾವು ಉತ್ಪಾದಿಸುವ ವಸ್ತುಗಳ ನೇರಕ್ಕೆ ನಮ್ಮಲ್ಲಿ ಕನಸು ಬಿತ್ತಿ ಬಿಟ್ಟವಲ್ಲಾ ಎಂದು. ಇರಲಿ, ಆ ಬಗ್ಗೆ ಇನ್ನೊಮ್ಮೆ ಸುದೀರ್ಘ ಬರೆಯುವ ಇರಾದೆ ಇದೆ. ಈಗ ಮತ್ತೆ ಆ ಊರಿನ ನೆನಪಿಗೆ ಬರುತ್ತೇನೆ.

ನಾನು ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ ಒಂದೇ ಒಂದು ದಿನಕ್ಕೂ ಒಂದು ಕೋಗಿಲೆಯ ಕೂಗನ್ನಾಗಲಿ, ಹಕ್ಕಿಗಳ ಕಲರವವನ್ನಾಗಲಿ ಕಿವಿ ಆನಿಸಿ ಕೇಳಿದ ನೆನಪೇ ಇಲ್ಲ. ನಮಗೆ ಒಂದು ಪ್ರಪಂಚ ಅಥವಾ ಪರಿಸರದ ಬಗ್ಗೆ ಬೇಸರ ಹುಟ್ಟಿದರೆ ಹೇಗೆ ನಾವು ಅದರಿಂದ ವಿಮುಖರಾಗುತ್ತೇವೆ, ಹೇಗೆ ಅದನ್ನು ನಮ್ಮೊಳಗೆ ಬಿಟ್ಟುಕೊಳ್ಳದೆ ಇರುತ್ತೇವೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ... ಆಗ ದೂರದರ್ಶನದಲ್ಲಿ ಪ್ರತಿ ಶುಕ್ರವಾರ ಪ್ರಣಯ್ ರಾಯ್ರ "ವಲ್ಡರ್್ ದಿಸ್ ವೀಕ್' ಕಾರ್ಯಕ್ರಮ ಬರುತ್ತಿತ್ತು. ಪ್ರಣಯ್ ಈಗಲೂ ಎನ್ಡಿಟಿವಿಯಲ್ಲಿ ಅವರ ಆಗಿನ ಬುಲೆಟಿನ್ಗಳ ಕ್ಲಿಪಿಂಗ್ಸ್ ಬಳಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಆಗ ಡಿಡಿಯಲ್ಲಿ ಭಿತ್ತರವಾಗುತ್ತಿದ್ದ 'ಸುರಭಿ', 'ವಲ್ಡರ್್ ದಿಸ್ ವೀಕ್', 'ರಂಗೋಲಿ' ಇವೆಲ್ಲಾ ಜಗತ್ತಿನೆಡೆಗಿನ ನಮ್ಮ ಬೆಳಕಿಂಡಿಗಳೇ ಆಗಿದ್ದವು. ಇರಲಿ, ಆಲಿಸಿದ್ದರೆ ಆ ಹಳ್ಳಿಯಲ್ಲಿ ಕೋಗಿಲೆ ಕೂಗು ಕೇಳಲಿಕ್ಕೆ ಭರಪೂರ ಅವಕಾಶ ಇತ್ತು. ಕೋಗಿಲೆ ಕೂಗು ಕೇಳುತ್ತಲೇ ಒಂದಿಷ್ಟು ಸ್ವರಗಂಧವನ್ನೂ ಪಡೆಯಬಹುದಿತ್ತೇನೋ.. ಆದರೆ ನನಗೆ ಕೋಗಿಲೆ ಕೂಗಿಗಿಂತ ಪ್ರಣಯ್ರ ಇಂಗ್ಲಿಷ್ನಲ್ಲೇ ಆಸಕ್ತಿ... ತಪ್ಪೋ ಸರಿಯೋ ಒಂದು ಮಟ್ಟಕ್ಕಂತೂ ಇಂಗ್ಲಿಷ್ ಓದುತ್ತಿದ್ದೆ. ಆದರೆ ಆಗಿನ್ನೂ ಆ ಭಾಷೆಯನ್ನು ಅಥರ್ೈಸಿಕೊಳ್ಳುವ ಲಯ ನನಗೆ ದಕ್ಕಿರಲಿಲ್ಲ. "ವಲ್ಡರ್್ ಆಫ್ ಸ್ಪೋಟ್ರ್ಸ' ಅನ್ನು ಕ್ರೀಡಾ ಜಗತ್ತು ಎಂದು ಅಥರ್ೈಸದೆ 'ಜಗತ್ತೇ ಕ್ರೀಡೆ' ಎಂದೆಲ್ಲಾ 'ವಿಫುಲವಾಗಿ' ಅರ್ಥ ಮಾಡಿಕೊಳ್ಳುವಷ್ಟು ಭಾಷಾ ಜ್ಞಾನ! ಒಮ್ಮೆ ಇದನ್ನೇ ಅಪ್ಪನ ಮುಂದೆಯೂ ವಾದಿಸಿ ಉಗಿಸಿಕೊಂಡಿದ್ದೆ.. ಹೋಗಲಿ ಬಿಡಿ, ಅದೇನು ಅಂಥ ದಡ್ಡತನ ಅಲ್ಲ. ಆಗೆಲ್ಲಾ ಬೆಂಗಳೂರಿನ ಬಹುತೇಕ ಕಾನ್ವೆಂಟ್ ಶಾಲಾ ಮಕ್ಕಳ ಇಂಗ್ಲಿಷ್ ಸಹ, "ಮಿಸ್ ಹಿ ಈಸ್ ಪಿಂಚಿಂಗ್ ಮಿಸ್' ಎನ್ನುವುದನ್ನು ಮೀರಿರಲಿಲ್ಲ.

ಇಂಥ ಬೇಡದ ಊರಿನಲ್ಲಿ, ತಿರಸ್ಕಾರದ ಮನಸ್ಥಿತಿಯಲ್ಲಿ ಇದ್ದ ನನಗೆ ಒಬ್ಬ ಗೆಳೆಯ ಸಿಕ್ಕ. ಆ ಕಾಲಘಟ್ಟದ ನನ್ನ ಆತ್ಮೀಯ ಗೆಳೆಯ ಎನ್ನಲು ಅಡ್ಡಿಯಿಲ್ಲ. ನಾರಾಯಣ ಅವನ ಹೆಸರು. ಬೇಡದ ಊರಲ್ಲಿ ಸಾಕು ಸಾಕೆನಿಸುವಷ್ಟೇ ಇದ್ದ ಗೆಳೆಯರಲ್ಲಿ ಇವನು ಆತ್ಮೀಯ. ಆ ಊರಿನಲ್ಲಿ ಶಾಲೆಗೆ ಹೋದ ಮೊದಲ ದಿನವೇ ನಾನು ಈ ನಾರಾಯಣನನ್ನು ಕಂಡಿದ್ದೆ. ಶಾಲೆಯ ಬೆಳಗಿನ ಬೆಲ್ ಹೊಡೆದಾಗ ಪ್ರಾರ್ಥನೆಗೆಂದು ಶಾಲಾ ಮೈದಾನದಲ್ಲಿ ನೆರೆದಿದ್ದ ಹುಡುಗರ ಸಾಲನ್ನು ಈತ ಸರಿ ಮಾಡುತ್ತಿದ್ದ. ಸಾಲು ಡೊಂಕಾಗದಂತೆ ಮುತುವಜರ್ಿವಹಿಸಿ, ವಿದ್ಯಾಥರ್ಿಗಳ ನಡುವೆ ಸಮಾನ ಅಂತರ ಇರುವಂತೆ ಭುಜದ ಮೇಲೆ ಕೈ ಇರಿಸಿ ಅಳತೆ ತೆಗೆದುಕೊಳ್ಳಲು ಹೇಳಿ ನಿಲ್ಲಿಸುತ್ತಿದ್ದ. ವಯಸ್ಸು, ದೇಹ ಎರಡರಲ್ಲೂ ದೊಡ್ಡವನಾಗಿದ್ದ ಅವನನ್ನು ಮೊದಲಿಗೆ ನೋಡಿ ನಾನು ಯಾರೋ ಏಳನೇ ಕ್ಲಾಸಿನ ಹುಡುಗನೋ ಅಥವಾ ಶಾಲೆಯಲ್ಲಿ ಕೆಲಸಕ್ಕೆಂದು ಇಟ್ಟುಕೊಂಡಿರುವ ಅಟೆಂಡರ್ ಕೆಲಸದ ಹುಡುಗನೋ ಇರಬೇಕು ಅಂದುಕೊಂಡಿದ್ದೆ.

ಪ್ರಾರ್ಥನೆ ಅಂದಿದ್ದಕ್ಕೆ ನೆನಪಾಯಿತು ನೊಡಿ, ಅಂದು ಮೊದಲ ದಿನವೇ ಪ್ರಾರ್ಥನೆ ನಡೆವಾಗ ಬೇರೆ ಬೇರೆ ಸಾಲಿನಲ್ಲಿ ನಿಂತಿದ್ದ ಮೂರ್ನಾಲ್ಕು ಹುಡುಗ ಹುಡುಗಿಯರು ಧಬಾರ್, ಧಭಾರ್ ಎಂದು ಬಿದ್ದಿ ದ್ದರು. ಅದೊಂದು ನಿತ್ಯ ಕರ್ಮವಾಗಿದ್ದ ಕಾರಣವೇ ಇರಬೇಕು, ಮೇಷ್ಟ್ರುಗಳು ಸಹ ತಲೆ ಕೆಡೆಸಿಕೊಳ್ಳದೆ ಸುಮ್ಮನೆ ಇದ್ದರು. "ಜಯ ಭಾರತ ಜನನಿಯ ತನುಜಾತೆ'ಯನ್ನು ರಾಗವಾಗಿ ಹಾಡಿ, "ಯಾಕುಂದೇಂದು ತುಷಾರಹಾರಧವಳಾ' ಹೇಳಿ ರಾಷ್ಟ್ರಗೀತೆ ಮುಗಿಸುವ ಹೊತ್ತಿಗೆ ಹುಡುಗ ಹುಡುಗಿಯರು ಹೀಗೆ ಅಲ್ಲಲ್ಲೇ ಧಬಾರನೇ ಬೀಳುವುದು ಸಾಮಾನ್ಯವಾಗಿತ್ತು. ಈ ದೃಶ್ಯ ನಾನು ಹೈಸ್ಕೂಲ್ ಮುಗಿಸುವವರೆಗೂ ಮುಂದುವರೆದೇ ಇತ್ತು ಬಿಡಿ. ಈಗಲೂ ಇರಬಹುದೇನೋ! ಹಳ್ಳಿ ಹೈಕಳು, ಮೆಟ್ರೋ ಮಕ್ಕಳು ಎನ್ನುವ ಭೇದವಿಲ್ಲದೆ ಹೀಗೆ ಬೆಳಗಿನ ಹೊತ್ತು ಶಾಲಾ ಮಕ್ಕಳು ಕುಸಿಯಲು ಕಾರಣ ಬರೋಬ್ಬರಿ 20 ನಿಮಿಷ ಮೀರಿ ಇರುತ್ತಿದ್ದ ಪ್ರಾರ್ಥನೆ... ಇರಲಿ ಈಗ ನಾರಾಯಣನ ಕಥೆಗೆ ಬರೋಣ.

ಅವತ್ತು ಮೊದಲ ದಿನ ಅವನನ್ನು ನೋಡಿದೆನಲ್ಲಾ, ಅನಂತರ ಒಂದು ಮಜಾ ವಿಷಯ ನಡೆಯಿತು. ನಾನು ಎಷ್ಟನೇ ಕ್ಲಾಸಿಗೆ ಸೇರಿದ್ದೇನೆ ಎನ್ನುವುದನ್ನು ಸರಿಯಾಗಿ ವಿಚಾರಿಸಿಕೊಳ್ಳದ ಮೇಷ್ಟ್ರೊಬ್ಬರು ನನ್ನನ್ನು ಮತ್ತಾವುದೋ ತರಗತಿಯ ಸಾಲಿನಲ್ಲಿ ನಿಲ್ಲಿಸಿಬಿಟ್ಟಿದ್ದರು. ಪ್ರಾರ್ಥನೆ ಮುಗಿದ ನಂತರ ಅದೇ ಸಾಲಿನಲ್ಲಿ ಸಾಗಿ ಕ್ಲಾಸ್ ರೂಮಿನಲ್ಲಿ ಕುಳಿತೆ. ಐದು ಹತ್ತು ನಿಮಿಷ ನಂತರ ಮೇಷ್ಟ್ರು ಸಹ ಬಂದರು. ಅಟೆನ್ಡೆನ್ಸ್ ಹಾಕಿದರು. ಅದರಲ್ಲಿ ನನ್ನ ಹೆಸರು ಇರಲಿಲ್ಲ. ನಾನು ಆಗಷ್ಟೇ ಶಾಲೆಗೆ ಸೇರಿದ್ದ ಕಾರಣ ನನ್ನ ಹೆಸರು ರೆಜಿಸ್ಟರ್ನಲ್ಲಿ ಇಲ್ಲ ಎಂದುಕೊಂಡೆ. ನಮ್ಮ ತಂದೆಯ "ಸಕರ್ಾರಿ ವಲಸೆಯ' ಫಲಾನುಭವಿಯಾಗಿದ್ದ ಕಾರಣ ಅಷ್ಟು ಹೊತ್ತಿಗಾಗಲೇ ನನಗೆ ಎರಡು ಶಾಲೆ ನೋಡಿದ್ದ ಅನುಭವ ಇತ್ತು.

ರೆಜಿಸ್ಟರ್ ಮುಗುಚಿ ಹಾಕಿದ ಮೇಷ್ಟ್ರು ಬೋಡರ್್ ಮೇಲೆ ಸೀಮೆಸುಣ್ಣವನ್ನು ಕುಟ್ಟುವಂತೆ ಮಾಡುತ್ತಾ ಪಟಪಟನೆ ಪಾಠದ ಹೆಸರು, ತರಗತಿ ಎಲ್ಲವೂ ಬರೆದರು. ಆಗ ತಿಳಿಯಿತು ನೋಡಿ ಅದು ನಾನು ಓದಬೇಕಿದ್ದ ತರಗತಿ ಅಲ್ಲ ಎಂದು. ಕೂಡಲೇ ಅಧ್ಯಾಪಕರಿಗೆ ತಡವರಿಸದೆ ನನ್ನ ಪುರಾಣವೆಲ್ಲಾ ಹೇಳಿಕೊಂಡೆ. ಜವಾನನನ್ನು ಕರೆದ ಅವರು ನಾನು ಹೋಗ ಬೇಕಿದ್ದ ತರಗತಿಯ ಕೊಠಡಿಗೆ ಬಿಡುವಂತೆ ಹೇಳಿದರು. ಆತ ನನ್ನನ್ನು ಕರೆದೊಯ್ದು ಮತ್ತೊಂದು ಕೊಠಡಿಗೆ ಬಿಟ್ಟ. ಅದರ ಒಳಗೆ ಯಾರೂ ಅಧ್ಯಾಪಕರು ಕಾಣಲಿಲ್ಲ. ಸ್ವಲ್ಪ ಮುಜುಗರದಿಂದಲೇ ಹಿಂದು ಮುಂದು ಮಾಡಿ ಒಳಗೆ ಹೆಜ್ಜೆ ಇಟ್ಟೆ, ಅಲ್ಲಿ ನೋಡಿದರೆ ಮತ್ತದೇ ದೊಡ್ಡ ಹುಡುಗ. ಅಲ್ಲಿದ್ದ ಹುಡುಗರೆಲ್ಲಾ ನನ್ನ ವಯಸ್ಸಿನವರೇ ಆದರೂ ಇವನೊಬ್ಬ ಮಾತ್ರ ಗಢವನ ಹಾಗೆ ಇದ್ದ. ಮಾನಿಟರ್ ಆಗಿದ್ದ ಕಾರಣ ಜಲಬಾಧೆ ತೀರಿಸಲು ಹೋಗಿದ್ದ ಮೇಷ್ಟ್ರ ಅನುಪಸ್ಥಿತಿ ತುಂಬಿದ್ದ ಎನ್ನುವುದು ಆಮೇಲೆ ಅರಿವಿಗೆ ಬಂತು ಬಿಡಿ. ಮೇಷ್ಟ್ರು ಬಂದ ಮೇಲೆ ಅವನೇ ಅವರಿಗೆ "ಸಾರ್, ಹೊಸ ಹುಡುಗ ಬಂದಿದ್ದಾನೆ' ಎಂದೂ ಹೇಳಿದ. ನನ್ನ ಪೂವರ್ಾಪರ ಕೇಳಿಕೊಂಡ ಮೇಷ್ಟ್ರು ಮುಂದಿನ ಸಾಲುಗಳು ತುಂಬಿದ್ದ ಕಾರಣ ಆ ದೊಡ್ಡ ಹುಡುಗನ ಪಕ್ಕವೇ ಹಿಂದೆ ಕೂರಲು ಹೇಳಿದರು. ಆಮೇಲೆ ಒಂದಷ್ಟು ಹೊತ್ತು ಪಾಠ ಮಾಡಿ, ಏನೋ ಬರೆಯಲು ಕೊಟ್ಟು ಹೊರಗೆ ಮೆಟ್ಟಿಲ ಮೇಲೆ ನಿಂತು ಯಾರೊಟ್ಟಿಗೋ ಹರಟ ತೊಡಗಿದರು.

ಆಗ ಸಮಯ ನೋಡಿ ಆ ದೊಡ್ಡ ಹುಡುಗ ಪಿಸುಗುಟ್ಟುತ್ತಾ ಕೇಳಿದ, 'ಅಪ್ಪಿ, ನಿನ್ನ ಹೆಸರೇನು?' ಅದುವರೆಗೆ ಗಡವನಂತೆ ಕಾಣುತ್ತಿದ್ದ ಹುಡುಗ ಅನಿರೀಕ್ಷಿತ ಪ್ರಶ್ನೆ ಮೂಲಕ ಸ್ನೇಹಕ್ಕೆ ಶುಭಾರಂಭ ಮಾಡಿದ್ದ. ಅಲ್ಲಿಂದಾಚೆಗೆ ಆ ಹಳ್ಳಿಯಲ್ಲಿ ಇದ್ದಷ್ಟೂ ದಿನ 'ಅಪ್ಪಿ, ಅಮ್ಮಿ' ನನ್ನ ಕಿವಿಗೆ ಒಗ್ಗಿ ಹೋಯಿತು. ಹೀಗೆ ಹೆಸರು ಕೇಳಿದವನು ಮುಂದುವರೆದು ನನ್ನ ಹುಟ್ಟೂರು, ಅಪ್ಪನ ಕೆಲಸ ಎಲ್ಲವೂ ವಿಚಾರಿಸಿಕೊಂಡ. ಆದರೆ ತನ್ನ ಬಗ್ಗೆ ಮಾತ್ರ ಹೆಚ್ಚು ಹೇಳದೆ ಕೇವಲ ಹೆಸರು ಮಾತ್ರ ಹೇಳಿದ. ಅವನ ತಂದೆ, ತಾಯಿ ಬಗ್ಗೆ ಏನೂ ಹೇಳಲಿಲ್ಲ. ವಯಸ್ಸಿನಲ್ಲಿ ಬರೋಬ್ಬರಿ ನಾಲ್ಕು ವರ್ಷ ದೊಡ್ಡವನಿದ್ದ. ನನ್ನ ಅಣ್ಣನ ವಾರಿಗೆಯವನು. ನಾರಾಯಣನ ತಂದೆ, ತಾಯಿ ತೀರಿಕೊಂಡಿದ್ದರು. ಹಾಗಾಗಿ ಅಣ್ಣನ ಮನೆಯಲ್ಲಿದ್ದ. ತಂದೆ ತಾಯಿ ಹೋದ ನಂತರ ಅಣ್ಣಂದಿರು, ಅಕ್ಕಂದಿರು, ಸಂಬಂಧಿಕರ ಮನೆಹೀಗೆ ಬೇರೆ ಬೇರೆ ಊರಿನಲ್ಲಿ ಮೂರ್ನಾಲ್ಕು ವರ್ಷ ಇದ್ದನಂತೆ. ಹಾಗಾಗಿಯೇ ನಾಲ್ಕು ವರ್ಷ ಶಾಲೆಯಿಂದಲೂ ದೂರವಿದ್ದ ಎಂದು ಮುಂದೆ ಕೆಲ ದಿನದಲ್ಲಿ ಹೇಳಿಕೊಂಡ. ಅವನ ಅಣ್ಣಂದಿರಲ್ಲಿ ಒಬ್ಬರು ಮುತುವಜರ್ಿ ವಹಿಸಿದ ಕಾರಣ ಮತ್ತೆ ಶಾಲೆಯತ್ತ ಮುಖ ಮಾಡಿದ್ದ.

ಅರ್ಧದಲ್ಲಿಯೇ ಶಾಲೆ ಬಿಟ್ಟಿದ್ದ ಪರಿಣಾಮ ಮತ್ತದೇ ತರಗತಿಗೆ ಸೇರಿದ್ದ. ಪರಿಣಾಮ ನನ್ನ ಅಣ್ಣನ ಜೊತೆ ಇರಬೇಕಾದವನು ನನ್ನ ಜೊತೆಗಿದ್ದ. ನನ್ನ ಅಣ್ಣನ ಗೆಳೆಯರನೇಕರು ಇವನನ್ನು ನೋಡಿ ನಿನ್ನ ತಮ್ಮನ ಫ್ರೆಂಡು ನಂ ಜೊತೆ ಇರಬೇಕಿತ್ತು, ಆದ್ರೆ ಸ್ಕೂಲ್ ಬಿಟ್ಟ ಕಾರಣ ಈಗಲೂ ಅದೇ ತರಗತಿಯಲ್ಲೇ ಇದ್ದಾನೆ ಎಂದು ಆಡಿಕೊಳ್ಳುತ್ತಿದ್ದರಂತೆ. ಅದನ್ನು ಅಣನ್ಣೇ ಹೇಳಿದ್ದ. ಆದರೆ ನನಗಂತೂ ನಾರಾಯಣ ಸಿಕ್ಕಿದ್ದು ಖುಷಿಯೇ ಆಗಿತ್ತು. ನನ್ನ ವಯಸ್ಸಿನ ಹುಡುಗರು ನನಗೆ ಯಾವತ್ತೂ ಕಿರಿಕಿರಿ ಅನಿಸುತ್ತಿದ್ದರು. ವರ್ತನೆಯಲ್ಲಿ ಅವರು ನನಗಿಂತ ತುಂಬಾ ಚಿಕ್ಕವರಂತೆ ಭಾಸವಾಗುತ್ತಿತ್ತು. ಬಹುಶಃ ನಾನು ನನ್ನ ವಯಸ್ಸು ಮೀರಿ ಆಲೋಚಿಸುತ್ತಿದ್ದುದು, ಓದಿಕೊಂಡಿದ್ದುದು ಇದಕ್ಕೆ ಕಾರಣವಿರಬಹುದು. ಹಾಗಾಗಿ ನಾರಾಯಣ ನನಗೆ ಹತ್ತಿರವಾದ, ಅವನಿಗೂ ಅವನ ವಯಸ್ಸಿಗೆ ತಕ್ಕಂತೆ ಯೋಚಿಸುವ ಮನಸ್ಸೊಂದು ಬೇಕಿತ್ತು. ಪ್ರಪಂಚದ ಬಗ್ಗೆ ಅವನಿಗಿದ್ದ ವಿಪರೀತ ಕುತೂಹಲವನ್ನು ತಣಿಸುವ ಜೊತೆಗಾರರು ಬೇಕಿತ್ತು. ಅವನ ವಯಸ್ಸಿಗಿಂತ ಹಿಂದಿನ ತರಗತಿಯಲ್ಲಿ ಇದ್ದುದರಿಂದ ಸಹಜವಾಗಿಯೇ ಅವನಿಗೆ ತರಗತಿಯ ಪಾಠ, ಲೆಕ್ಕ ಬೇಸರ ಹುಟ್ಟಿಸುತ್ತಿತ್ತು. ತರಗತಿಯಲ್ಲಿ ಓದು, ಬರಹವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಿದ್ದ. ಆದರೂ ಅವನಿಗೆ ಶಹಭಾಷ್ಗಿರಿ ಏನೂ ಸಿಗುತ್ತಿರಲಿಲ್ಲ. ಕಾರಣ ಮತ್ತದೇ - ವಯಸ್ಸು. ನಾನು ಅವನಿಗಿಂತಲೂ ಬೇಗ ಓದು ಬರಹ ಮುಗಿಸುತ್ತಿದ್ದೆ. ಅವನಿಗಿಂತ ಸ್ಪಷ್ಟವಾಗಿ ಓದುತ್ತಿದ್ದೆ. ಹಾಗಾಗಿ ಅವನಿಗೆ ನಾನು ಕುತೂಹಲಕಾರಿಯಾಗಿಯೂ, ಸವಾಲಾಗಿಯೂ ಕಾಣತೊಡಗಿದ್ದೆ. ಅಡೊಲೊಸೆನ್ಸ್ ಸಮೀಪವಿದ್ದ ಅವನ ತವಕ ತಲ್ಲಣಗಳನ್ನು ಹೊರತು ಪಡಿಸಿದರೆ ಉಳಿದಂತೆ ಪಠ್ಯ, ಪಠ್ಯೇತರ ವಿಷಯಗಳಲ್ಲಿ ನನ್ನ ಬುದ್ಧಿಮತ್ತೆ ಅವನಿಗೆ ಹಿಡಿಸಿತ್ತು.

ಸಮಯ ಸರಿಯಿತು, ಪರೀಕ್ಷೆಗಳು ಮುಗಿದು ಮೈದಾನಕ್ಕೆ ಬೇಸಿಗೆ ಇಳಿಯಿತು. ತಾತ, ಅಜ್ಜಿ ಊರು, ಕಸಿನ್ಸ್ಗಳೊಡನೆ ಕಾರುಬಾರು ಎಲ್ಲವೂ ಸರಸರನೆ ಕಳೆಯಿತು. ಕಡೆಗೆ ಬೇಡ ಬೇಡವೆನಿಸಿದರೂ ಶಾಲೆಯ ಬಾಗಿಲು ತೆಗೆದೇ ತೆಗೆಯಿತು. ಆದರೆ ಈ ಬಾರಿ ನಾರಾಯಣ ಮತ್ತು ನಾನು ಒಂದೇ ಸೆಕ್ಷನ್ನಲ್ಲಿ ಇರಲಿಲ್ಲ. ಕಂಬೈಂಡ್ ಕ್ಲಾಸ್ ಆದಾಗ ಮಾತ್ರ ಒಟ್ಟಿಗೆ ಸೇರುತ್ತಿದ್ದೆವು. ಆಗೆಲ್ಲಾ ಅವನು ನನಗಾಗಿ ಜಾಗ ಹಿಡಿದಿಟ್ಟಿರುತ್ತಿದ್ದ. ಉಳಿದಂತೆ ಬೆಲ್ ಹೊಡೆಯುವುದಕ್ಕೂ ಮುನ್ನ ಮತ್ತು ಸಂಜೆ ಅಟ ಆಡಲು ಬಿಟ್ಟಾಗ ಮಾತ್ರ ಹರಟೆ ಹೊಡೆಯಲು ಸಮಯ ಸಿಗುತ್ತಿತ್ತು. ಹೀಗಿರುವಾಗ ನಾರಾಯಣನಿಗೆ ಒಂದು ದಿನ ಅವನ ಕ್ಲಾಸ್ ಟೀಚರ್, "ನಾರಾಯಣ ಇನ್ನು ಮೇಲೆ ನೀನು ಪ್ಯಾಂಟ್ ಹಾಕಿಕೊಂಡು ಬಾ' ಅಂದರಂತೆ. ಅದಾದ ಮೇಲೆ ಅವನು ಯಾವತ್ತೂ ನಿಕ್ಕರ್ ಹಾಕಿಕೊಂಡು ಶಾಲೆಗೆ ಬರಲೇ ಇಲ್ಲ. ವರ್ಷವಿಡೀ ತನ್ನ ಬಳಿ ಇದ್ದ ಎರಡೇ ಎರಡು ಪ್ಯಾಂಟ್ ಹಾಕಿದ್ದ. ಅದಾಗಲೇ ಅವನು ಎತ್ತರದಲ್ಲಿ ಮೇಷ್ಟ್ರುಗಳ ಸಮಕ್ಕೆ ಇದ್ದ. ಕೆಲವರಿಗಿನ್ನ ಉದ್ದವೇ ಇದ್ದ. ಗುಂಗರು ಕೂದಲು, ಚಿಗುರು ಮೀಸೆಯಿದ್ದ ಆಕರ್ಷಕ ಮುಖ.

ಈ ನಡುವೆ ಕೆಲ ಹುಡುಗರು ನನಗೆ ಅವನ ಬಗ್ಗೆ ವಿಪರೀತ ಕಂಪ್ಲೇಂಟ್ ಹೇಳಲು ಶುರು ಮಾಡಿದರು. ಮತ್ತೆ ಕೆಲವರು ಅವನನ್ನು ವಿಪರೀತವಾಗಿ ಹಚ್ಚಿಕೊಂಡರು. ನಾರಾಯಣ ಪೋಲಿ ಆಗಿದ್ದಾನೆ, ಕ್ಲಾಸ್ಗೆ ಚಕ್ಕರ್ ಹೊಡೆಯುತ್ತಾನೆ ಎನ್ನುವುದು ಅವನ ಬಗ್ಗೆ ಕಂಪ್ಲೇಂಟ್ ಹೇಳುತ್ತಿದ್ದವರ ಮಾತಾಗಿತ್ತು.. ಅವರ ಕಣ್ಣಿಗೆ ನಾರಾಯಣ ಪೋಲಿ ಆಗಲು ಕಾರಣ ವಿಪರೀತ ಎನಿಸುವಷ್ಟು ಸಿನಿಮಾ ನೋಡುತ್ತಿದ್ದುದು, ವಿಪರೀತ ಸ್ಟೈಲ್ ಮಾಡುತ್ತಿದ್ದುದು, ಊರೂರು ಸುತ್ತುತ್ತಿದ್ದುದು, ಎಲ್ಲಕ್ಕಿಂತ ಹೆಚ್ಚಾಗಿ ಹುಡುಗಿಯರ ಅಂದ ಚೆಂದದ ಬಗ್ಗೆ ರಸವತ್ತಾಗಿ ಮಾತನಾಡುತ್ತಿದ್ದುದು, ಆದರೆ ಇದೇ ಕಾರಣಕ್ಕೆ ಅವನು ಮತ್ತೆ ಅನೇಕರಿಗೆ ರೋಚಕವಾಗಿದ್ದ.. ನನಗಂತೂ ಎರಡೂ ವಿಶೇಷ ಎನಿಸಲಿಲ್ಲ. ಏಕೆಂದರೆ ನನಗೆ ಅವನ ತವಕಗಳು ಪೂರ್ಣವಾಗಿ ಅಲ್ಲದಿದ್ದರೂ ಅರೆಬರೆಯಾಗಿಯಾದರೂ ಅರ್ಥವಾಗಿತ್ತು...

ನಾರಾಯಣ ನನ್ನನ್ನು ಮಾತನಾಡಿಸಲೆಂದೇ ಕೆಲವೊಮ್ಮೆ ಹುಡುಕಿಕೊಂಡು ಬರುತ್ತಿದ್ದ. ವಿಪರೀತ ಸಿನಿಮಾ ಹುಚ್ಚು ಇದ್ದ ಅವನು ಶಿವಣ್ಣನ ಕಟ್ಟಾ ಅಭಿಮಾನಿ, ಆಗಿನ್ನೂ ಶಿವರಾಜ್ ಕುಮಾರ್ ಇನ್ನಿಂಗ್ಸ್ ಶುರು ಆಗಿ ನಾಲ್ಕೈದು ವರ್ಷ ಆಗಿತ್ತು ಅಷ್ಟೇ. ಶಿವಣ್ಣನಂತೆ ಹೇರ್ ಸ್ಟೈಲ್ ಬಿಡುತ್ತೇನೆ ಅಂತಾ ನಾರಾಯಣ ಗುಂಗುರು ಕೂದಲನ್ನು ಉದ್ದ ಬಿಟ್ಟ. ಪ್ರತಿ ವಾರವೂ ತಪ್ಪದೆ ಸಿನಿಮಾ ನೋಡಲೆಂದು ಸಿಟಿಗೆ ಹೋಗುತ್ತಿದ್ದ. ಹಿಂದಿ ಸಿನಿಮಾಗಳ ಬಗ್ಗೆ ಅವನಿಗೆ ಒಳ್ಳೆ ಹುಚ್ಚಿತ್ತು. ಆಗಂತೂ ಬಾಲಿವುಡ್ ನಲ್ಲಿ ಪ್ರೇಮಪರ್ವ. 'ಮೈನೆ ಪ್ಯಾರ್ ಕಿಯಾ', 'ದಿಲ್', 'ಕಯಾಮತ್ ಸೇ ಕಯಮಾತ್ ತಕ್', 'ಅಶಿಕಿ' ಹೀಗೆ ಬಿಸಿರಕ್ತದ ಪ್ರೇಮ ಕಾವ್ಯಗಳದ್ದೇ ಅಬ್ಬರ. ಹಾಗಾಗೇ ಆಗಿನ ದೊಡ್ಡವರ ಬಾಯಲ್ಲಿ ಅದು, "ಯುವ ಪೀಳಿಗೆ ಕುಲಗೆಟ್ಟು ಹೋಗಲು ಸಂಕ್ರಮಣ ಕಾಲ'. ಇದು ಸಾಲದೆಂಬಂತೆ ರವಿಚಂದ್ರನ್ನ ಸಾಲು ಸಾಲು ಸಿನಿಮಾಗಳು. ಹೀಗಿರುವಾಗ ಹದಿಹರೆಯಕ್ಕೆ ಬಿದ್ದಿದ್ದ ನಾರಾಯಣ ಹೇಗೆ ತಾನೆ ನಾಲ್ಕು ವರ್ಷದ ಹಿಂದಿನ ತರಗತಿಯಲ್ಲಿ ಕುಳಿತು ನೀರಸವೆನಿಸುವ ಪಾಠ ಕೇಳಿಯಾನು ಹೇಳಿ? ಊರೂರು ಅಲೆದು ಕಂಡಾಪಟ್ಟೆ ಹುಡುಗಿಯರ ಸೌಂದರ್ಯವನ್ನೆಲ್ಲಾ ಕಣ್ತುಂಬಿಕೊಂಡು ಬಂದು ವಣರ್ಿಸಲು ಸಾಧ್ಯವಾಗದೆ ತೊಳಲಾಡುತ್ತಿದ್ದ ಅವನಿಗೆ ಹದಿನೈದೊಂದಲ ಮಗ್ಗಿ ಎಷ್ಟೆಲ್ಲಾ ಬೇಸರ ಹುಟ್ಟಿಸಿರಬೇಡ!!

ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್ ಖಾನ್ ಹೇಳುವ, "ಮಾ.. ವೋ ಮ್ಯಾಕ್ಸ್ಸಿ, ಮಿನಿ, ಮಿಡಿ, ಚೂಡಿ' ಎನ್ನುವ ಡೈಲಾಗಂತೂ ಅವನಿಗೆ ಯದ್ವಾತದ್ವ ಇಷ್ಟ ಆಗಿತ್ತು. ಅದೆಷ್ಟು ಸಾರಿ ಈ ಡೈಲಾಗ್ಅನ್ನು ಹೊಡೆಯುತ್ತಿದ್ದನೋ... "ಮೈನೆ ಪ್ಯಾರ್ ಕಿಯಾ' ಸಿನಿಮಾವನ್ನು ನಾನು ನೋಡಿದ್ದು ತಡವಾಗಿಯೇ ಆದರೂ ನಾರಾಯಣ ಈ ಡೈಲಾಗ್ ಮಾತ್ರ ಯಾವತ್ತೂ ನನ್ನೊಳಗೆ ಉಳಿದಿತ್ತು...

ಮುಂಚೆ ಎಲ್ಲಾ ನಾರಾಯಣ ನನ್ನನ್ನು ಇರಾನ್ - ಇರಾಕ್ ವಾರ್ ಬಗ್ಗೆ ಹೇಳು, ಅಮೆರಿಕ - ಇರಾಕ್ ವಾರ್ ಬಗ್ಗೆ ಹೇಳು, ಇಸ್ರೇಲ್ ಬಗ್ಗೆ ಹೇಳು, ಕುವೈತ್ ಬಗ್ಗೆ ಹೇಳು, ಸ್ಕಡ್ ಮಿಸಾಯಿಲ್, ಪೇಟ್ರಿಯಾಟ್ ಮಿಸಾಯಿಲ್ ಬಗ್ಗೆ ಹೇಳು ಅಂತೆಲ್ಲಾ ಸದಾ ಕಾಡುತ್ತಿದ್ದ. ವಿಪರೀತ ಮ್ಯಾಗ್ಜೈನ್ಗಳನ್ನು ಓದುತ್ತಿದ್ದ ನನ್ನ ಬಳಿ ನನ್ನ ವಯಸ್ಸಿಗೆ ನಿಲುಕುವಷ್ಟು ಮಾಹಿತಿ ಧಾರಳವಾಗಿಯೇ ಇರುತ್ತಿತ್ತು. ಇರಲಿ, ಹೀಗೆ ಗಲ್ಫ್ ವಾರ್ ಸುತ್ತಲೇ ಸುತ್ತುತ್ತಿದ್ದ ನಾರಾಯಣ ಅದ್ಯಾವಾಗ ಮ್ಯಾಕ್ಸಿ, ಮಿನಿ, ಮಿಡಿ, ಚೂಡಿಗೆ ಪಕ್ಷಾಂತರವಾದನೋ ಗೊತ್ತಾಗಲೇ ಇಲ್ಲ. ಈ ವಿಷಯಗಳಲ್ಲಿ ಅವನ ಜ್ಞಾನದಾಹ ತಣಿಸುವ ಯಾವುದೇ ಸಿದ್ಧತೆ ನನಗಿರಲಿಲ್ಲ. ಹಾಗಾಗೇ ಅವನು ಮುಂದೆ ಲವ್ಲೆಟರ್ಗಳ ಬರೆಯುವಾಗ ನನ್ನನ್ನು ಯಾವತ್ತೂ ಒಂದು ಮಾತು, ಸಣ್ಣದೊಂದು ಸಲಹೆ ಕೂಡಾ ಕೇಳಿರಲಿಲ್ಲ. ಮೊದಲೆಲ್ಲಾ ಕೇವಲ ಲವ್ ಲೆಟರ್ ಬರೆಯೋದು ಮಾತ್ರವೇ ಮಾಡುತ್ತಿದ್ದ ಅವನು ಆಮೇಲೆ ಅದನ್ನು ಕೊಡುವುದಕ್ಕೂ ಶುರುವಿಟ್ಟ.

ಕಡೆಗೆ ಈ ಚಟುವಟಿಕೆಗಳು ಮತ್ತೂ ಮುಂದುವರೆದು ಅವನು ಪ್ರಣ(ಳ)ಯಾಂತಕ ಕಾರ್ಯಕ್ರಮ ಹಮ್ಮಿಕೊಳ್ಳುವ ವೇಳೆಗೆ ಆ ಬೇಡದ ಊರಿಗೆ ಬೈ ಬೈ ಹೇಳುವ ಕಾಲ ನನಗೆ ಬಂದಿತ್ತು. ನಗರಕ್ಕೆ ಸ್ಥಳಾಂತರವಾಗುವ ಸಂಭ್ರಮದಲ್ಲಿ ಹಾಗೂ ಊರು ಬಿಡುವ ಕಾತರದಲ್ಲಿದ್ದ ನನಗೆ ಅವನನ್ನು ಭೇಟಿ ಮಾಡುವ ಅವಕಾಶ ಆಗಲಿಲ್ಲ. ಆ ಸಂಭ್ರಮದಲ್ಲಿ ಅವನಿಗೆ ಸಿಗುವುದು ಮುಖ್ಯ ಎಂದೂ ಅನಿಸಲಿಲ್ಲ. ಸಿಟಿ ಸೇರಿದ ಮೇಲಂತೂ ಹೊಸ ಸ್ಕೂಲು, ಹೊಸ ಫ್ರೆಂಡ್ಸ್ ಅದಕ್ಕಿಂತ ಮುಖ್ಯವಾಗಿ ನಾನು ಯಾವತ್ತೂ ಬಯಸಿದ್ದ "ಸೊಫೆಸ್ಟಿಕೇಟೆಡ್ ಲೈಫ್ ಸ್ಟೈಲ್' ನಡುವೆ ನಾರಾಯಣ ಅರೆಕ್ಷಣವೂ ಕಾಡಲಿಲ್ಲ. ಆಗ ಬಂದಿದ್ದೇ, "ನಾರಾಯಣನಿಗೆ ಇಲೆಕ್ಟಾನಿಕ್ ಅಂಗಡಿವರು ಮೀಸೆ ಕತ್ತರಿಸಿದ್ದಾರೆ. ಅವನು ಈಗ ಸ್ಕೂಲ್ಗೆ ಬರುತಾ ಇಲ್ಲ. ಮೇಷ್ಟ್ರು ಬೈದರು' ಅನ್ನೋ ಕಾಗದ. ಬೆಳೆದು ನಿಂತಿದ್ದ ನಾರಾಯಣನಿಗೆ ಆ ಊರಿನಲ್ಲಿದ್ದ ಇಲೆಕ್ಟ್ರಾನಿಕ್ ಅಂಗಡಿಯಲ್ಲಿನ ಕೆಲ ಪಡ್ಡೆಗಳು ಪುಸಲಾಯಿಸಿ, ಒಪ್ಪದಿದ್ದಾಗ ಒತ್ತಾಯದಿಂದಲೇ ಶೇವ್ ಮಾಡಿದ್ದರು. ಮೀಸೆ, ಗಡ್ಡ ಶೇವ್ ಮಾಡಿಕೊಂಡು ನಾರಾಯಣ ಮಿಡಲ್ಸ್ಕೂಲ್ನ ತನ್ನ ತರಗತಿಗೆ ಹೋಗಿದ್ದ. ಉರಿದು ಬಿದ್ದ ಮೇಷ್ಟ್ರು ಉಗಿದಿದ್ದರು. ಮೊದಲೇ ಮುಜುಗರ ಅನುಭವಿಸುತ್ತಿದ್ದ ನಾರಾಯಣನಿಗೆ ಮತ್ತೂ ಮುಜುಗರ ಹೆಚ್ಚಿ ಅಲ್ಲಿಂದಾಚೆಗೆ ಅವನು ಶಾಲೆಗೆ ಹೋಗುವುದನ್ನೇ ಬಿಟ್ಟ.

ನನ್ನನ್ನು ನೋಡಲೆಂದೇ ಒಂದೆರಡು ಬಾರಿ ಸಿಟಿಗೂ ಬಂದಿದ್ದ ನಾರಾಯಣ ಆಗ ಈ ಎಲ್ಲ ವಿಷಯವನ್ನು ವಿವರಿಸಿದ್ದ.. ಪ್ರೈವೇಟ್ ಆಗಿ ಎಸ್ಎಸ್ಎಲ್ಸಿ ಎಕ್ಸಾಮ್ ತಗೋತೀನಿ ಅಂತಾನೂ ಹೇಳಿದ್ದ. ಮತ್ತೊಂದು ಸಾರಿ ಬಂದವನು ಹೋಟೆಲೊಂದರಲ್ಲಿ ರವಾ ಇಡ್ಲಿ ಕೊಡಿಸಿ, ಕೋಕ್ ಕುಡಿಸಿ ಏಳನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನನ್ನು, "ನೀನು ಬೇಗ ಒಳ್ಳೇ ಹುಡುಗಿ ನೋಡಿ ಲವ್ ಮಾಡ್ಬಿಡು' ಎಂದು ಹೇಳಿ ಹೋಗಿದ್ದ. ನಾನು ಸಹ ಆಗ ಪ್ರಾಮಾಣಿಕವಾಗಿಯೇ ಅಂದುಕೊಂಡಿದ್ದೆ ನಾನು ಲವ್ ಮಾಡೋವಾಗ ನಾರಾಯಣನಿಗೆ ಖಂಡಿತ ಹೇಳೇ ಹೇಳುತ್ತೇನೆ ಅಂಥಾ..! ಆದರೆ, ಅದೇಕೋ ಅವನ ಆಸೆ ಅಷ್ಟು ಬೇಗ ಈಡೇರಲಿಲ್ಲ...!!

ಮುಂದೆ ಯಾವತ್ತೋ ಒಂದು ದಿನ ನಾನು ಆಯ್ದ ಕೆಲ ಆತ್ಮೀಯ ಗೆಳೆಯರಿಗೆ ಕಾಫೀ ಡೇ ಒಂದರಲ್ಲಿ ಪಾಟರ್ಿ ಕೊಟು,್ಟ "ಆಮ್ ಇನ್ ಲವ್' ಅಂತ ಉದ್ವೇಗದಿಂದ ಹೇಳೋ ಸಂದರ್ಭದಲ್ಲಿ ನಾರಾಯಣ ಅಪ್ಪಿತಪ್ಪಿಯೂ ಜ್ಞಾಪಕ ಬರಲಿಲ್ಲ.

ತಲೆತುಂಬಾ ಹುಡುಗಿಯರ ಕನಸು ಕಾಣುತ್ತಿದ್ದ ನಾರಾಯಣ, ಕೆರೆ ಬಳಿ ಮುಸ್ಸಂಜೆ ಮಬ್ಬಲ್ಲಿ 'ಕೇಳಿ' ನಡೆಸಿದ್ದುದನ್ನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದ. ಹಾಲು ತರಲೆಂದು ನೆರೆ ಮನೆಗೆ ಹೋಗಿ ಅಲ್ಲಿ ಇವನ ಮೇಲೆ ಯಾವತ್ತೂ ಕಣ್ಣಿಟ್ಟಿದ್ದ ಹುಡುಗಿಯೊಬ್ಬಳನ್ನು ಚುಂಬಿಸಿ ಬಂದಿದ್ದನ್ನೂ ವಿವರಿಸಿದ್ದ.. ಬುದ್ಧಿವಂತನಾದರೂ ಮುಜುಗರದಿಂದ ಓದಲಾಗದೆ, ಅಪ್ಪ ಅಮ್ಮನನ್ನು ಬಾಲ್ಯದಲ್ಲೇ ಕಳೆದುಕೊಂಡ ನಾರಾಯಣ, ಈಗಲೂ 'ಮಾ... ವೋ ಮ್ಯಾಕ್ಸಿ, ಮಿಡಿ, ಮಿನಿ' ಅನ್ನೋ ಡೈಲಾಗ್ ನೆನಪಿಸ್ಕೋತಾನಾ?.....

ನೆನಪೆಂಬ ಶಿವನ ಎಕ್ಕದ ಹೂ....

ಕಾಲ ಸರಿದಂತೆ ಒಂದಷ್ಟು ವ್ಯಕ್ತಿಗಳು ಕೇವಲ ನೆನಪುಗಳಾಗಿ ಮಾತ್ರವೇ ಮನೋಭಿತ್ತಿಯಲ್ಲಿ ಉಳಿದುಬಿಡುತ್ತಾರೆ. ಆ ಕೆಲ ಮುಖಗಳನ್ನು ನಾವು ಮತ್ತೆಂದೂ ನೊಡುವ, ಹುಡುಕುವ ಗೋಜಿಗೇ ಹೋಗುವುದಿಲ್ಲ. ಬದುಕ ಭಿತ್ತಿಯಲ್ಲಿ ಅವರು, ನಾವು ಅಲ್ಲಲ್ಲೇ ಇದ್ದರೂ ಮತ್ತಿನ್ನೆಂದೂ ಒಬ್ಬರನ್ನೊಬ್ಬರು ಕಾಣುವ ಪ್ರಯತ್ನ ಮಾಡುವುದಿಲ್ಲ. ಹುಡುಕಿದರೆ ಅವರು ಕೈಗೆ ಸಿಗುತ್ತಾರೆ, ಆದರೆ ಅದೇಕೋ ದಿಕ್ಕು ಬದಲಿಸಿದ ಬದುಕು ಮಾತ್ರ ನೆನಪುಗಳು ನೆನಪುಗಳಾಗೇ ಇರಲಿ ಬಿಡು ಎಂದು ನಮ್ಮನ್ನು ಕರೆದೊಯ್ದು ಬಿಡುತ್ತದೆ. ಒಂಥರಾ ಹೊಟ್ಟೆ ತುಂಬಿದ ಮೇಲೆ ಎಲೆಯಲ್ಲಿ ಉಳಿದ ಕಡೆಯ ತುತ್ತಿನಂತೆ... ಅದರ ಬಗ್ಗೆ ತಿರಸ್ಕಾರವಿರುವುದಿಲ್ಲ ಆದರೆ ನಾ ಹೊರಲಾರೆ ಅಂತಾ ಹೊಟ್ಟೆ ಹೇಳಿರುತ್ತದೆ. ಬಹುಶಃ ಕಾಲನ 'ಋಣ' ತೀರಿಸಲು ಬದುಕು ಅಲ್ಲಲ್ಲೇ ಬಿಟ್ಟ 'ಭಾರ' ಇದು ಇರಬಹುದು... ಹೀಗೆ ಮಗ್ಗಲು ಬದಲಿಸಿದ ಬದುಕಿನ ತಟ್ಟೆಯಲ್ಲಿ ಉಳಿದ ಅವರು, ಆ ವ್ಯಕ್ತಿಗಳು ದೂರದವರೇನೂ ಆಗಿರುವುದಿಲ್ಲ. ಜೀವನದ ಒಂದು ಘಟ್ಟದಲ್ಲಿ ಜೊತೆಗಾರರಾಗಿ ಸಂಭ್ರಮಿಸಿದ್ದವರೇ ಆಗಿರುತ್ತಾರೆ... ಆದರೆ ತನ್ನನ್ನೇ ತಾನು ಕಟ್ಟಿಕೊಳ್ಳುತ್ತಾ, ಹುತ್ತಗಟ್ಟುತ್ತಾ ಸಾಗುವ ಬದುಕು ಮತ್ತೆಲ್ಲೋ ಮುಖ ಮಾಡಿರುತ್ತದೆ. ಆ ಪಯಣದಲ್ಲಿ ಒಂದೊಂದೇ ಹೆಜ್ಜೆ ಸರಿದಂತೆ ಜೊತೆಗಾರರಾಗಿದ್ದವರು ವ್ಯಕ್ತಿಗಳಾಗಿ ಕಾಣಿಸತೊಡಗುತ್ತಾರೆ, ವ್ಯಕ್ತಿಗಳು ನಿಧಾನವಾಗಿ ಕೆಲ ಘಟನೆಗಳಾಗಿ ಸಾಂದ್ರಗೊಳ್ಳುತ್ತಾರೆ, ಆಮೇಲೆ ಘಟನೆಗಳೂ ಕರಗಿ ನೆನಪುಗಳು ಉಳಿಯುತ್ತವೆ. ಬದುಕು ಒಂದು ಹಂತ ಮುಟ್ಟಿ ಮಗ್ಗಲು ಬದಲಾಯಿಸಲು ಹೊರಟಾಗ ಆ ನೆನಪುಗಳು ಸಹ ಹತ್ತಿಯ ಎಳೆಯಂತೆ, ಎಕ್ಕದ ಗಿಡ ಗಾಳಿಗೆ ಹಾರಿಸಿದ ಬಿಳಿ ಪುಕ್ಕದಂತೆ ಹಗುರಾಗಿ ಅಲ್ಲಲೇ ಮನದ ಆಗಸದಲ್ಲಿ ಹಾರಿಕೊಂಡಿರುತ್ತವೆ.... ಅದರರ್ಥ ಆ ನೆನಪುಗಳು ಇನ್ನೇನು ಮನದ ಚಿಪ್ಪಿನಾಚೆ ಸಿಡಿದು ಅನಂತದಲ್ಲಿ ಲೀನವಾಗಲು ಸಜ್ಜು ಎಂದು.. ಅಟ್ಲೀಸ್ಟ್ ಆಗ ನಾವು ಕೊಂಚ ಅಲಟರ್್ ಆದರೆ ಅಂತಹ ನೆನಪುಗಳನ್ನು ಒಂದಿಷ್ಟು ದಾಖಲಿಸುವ ಪ್ರಯತ್ನ ಮಾಡಬಹುದೇನೋ... ಹೀಗೆ ಮಗ್ಗಲು ಬದಲಿಸಿದ ಬದುಕಿನ ಬೇಡದ ಕಾವು ಅಲ್ಲಲ್ಲೇ ಉಳಿದು ಆರಿ ಮರೆಯಾಗುವ ಮುನ್ನ ಆ ನೆನಪುಗಳಿಗೊಂದಿಷ್ಟು ಸೌಜನ್ಯ ವಿದಾಯ ಹೇಳಬೇಕಿದೆ.... ಹಾಗೆ ಮಾಡುವುದನ್ನು ನಾನು ಬದುಕಿನ ಋಣ ಅಂದುಕೊಂಡಿದ್ದೇನೆ.... ಎಂದೋ ಜೊತೆಗಾರರಾಗಿದ್ದು, ವ್ಯಕ್ತಿಗಳಾಗಿ, ನೆನಪುಗಳಾಗಿ ಕುಸಿದು ಇದೀಗ ಅಸ್ತಂಗತ ಕನಸಿನಂತೆ ಕಾಣುತ್ತಿರುವ ಆ ಒಂದು ಕಾಲದ ಕೆಲ ಗೆಳೆಯರ ನೆನಪಿನಲ್ಲಿ.....

Monday, February 1, 2010

ಆತ್ಮ ಆಗಸ ತಬ್ಬಿತ್ತು...

ಆತ್ಮ ಆಗಸ ತಬ್ಬಿತ್ತು. ಅಲ್ಲೆ ಅತ್ತಿತ್ತ ಅಲೆಯಲು ಹೋಗಿದ್ದ ದಿಕ್ಕು ತಾನೇ ದಿಕ್ಕು ತಪ್ಪಿ ತಬ್ಬಿಬ್ಬಾಗಿ ಅದೇಕೋ ಅಕಾರಣ ಮೇಲೆ ನೋಡಿ ಮುದಗೊಂಡಿತು. ಆ ಬಿಳಿ ಆಗಸವ ಹಬ್ಬಿದ ನೀಲಿ ಆತ್ಮ ಒಲುಮೆ ಸುರಿದು ಹಬೆ ಹಬೆಯಾಗಿ ಮುದ್ದಾಡುವ ಹೊತ್ತಲ್ಲಿ ನನ್ನಂತ ದಿಕ್ಕಿಗೆ ಇನ್ನೆಲ್ಲಿ ದಿಕ್ಕು ದೆಸೆ ಎಂದು ಮರುಗಿತು. ಇರುವುದೆಲ್ಲ ಸೊನ್ನೆ, ಶೂನ್ಯ ಅಲ್ಲಿ. ತುಂಬಿ ನಿಂತ ಪೂರ್ಣ, ಪರಿಪೂರ್ಣ, ಪರಿನಿವರ್ಾಣ ಶೂನ್ಯ. ಮೇರೆ ಮೀರಿದ ಮೇಲೆ ಮೂಡುವ ರತಿ ಮದನ ಶೂನ್ಯ ಎಂದುಕೊಂಡಿತು..

ಛೇ, ಇಲ್ಲೇನಿದೆ ಬರಿದೇ ದಿಕ್ಕು. ದಿಕ್ಕಿನ ಮುಂದೂ ದಿಕ್ಕು, ದಿಕ್ಕಿನ ಹಿಂದೂ ದಿಕ್ಕು; ದಿಕ್ಕು ದಿಕ್ಕಿಗೆ ಒಂದೊಂದು ದಿಕ್ಕು... ಥೂತ್ತೇರಿ, ನನ್ನ ಜನ್ಮಕ್ಕೆ ಜೀವನವೆಲ್ಲಾ ಒಂದು ಮೂಲೆಯಲ್ಲೇ ದಿಕ್ಕಾಗಿ ದಿಕ್ಕಿಲ್ಲದೆ ಕಳೆದು ಬಿಟ್ಟೆನಲ್ಲಾ ಎಂದು ಕೊರಗಿತು...ಅತ್ತ ಅಲ್ಲಿ ಮೇಲೆ ಬಣ್ಣಗಳಿಗೆ ಜೋಕಾಲಿ ಕಟ್ಟಿದ ಮದನ ಜೋಡಿ ವಿಲಾಸದ ಮೋಡಿಯಲಿ ತೇಲಿತ್ತು...
ಛೆ, ಛೇ ದಿಕ್ಕಾಗಿ ದಿಕ್ಕು ತಪ್ಪು ಬಾರದಿತ್ತು... ನನ್ನೊಳಗೆ, ಹೊರಗೆ ಹಬ್ಬಿಕೊಳ್ಳಬೇಕಿತ್ತು, ನನ್ನ ಅರಿವಿಗೂ ಬಾರದೆ ತುಂಬಿಕೊಳ್ಳಬೇಕಿತ್ತು ಎಂದು ಹಪಹಪಿಸಿತು.

ಅತ್ತ ಆಗಸದಿ ಹಿತವಾಗಿ ತಿಂಗಳು ಸುರಿಯ ತೊಡಗಿತು

ಒಳಗೂ ಹೊರಗೂ ಭಾವ ಬೆರಗು

ಹರವಿದ ಆಗಸದಿ ಉಕ್ಕೇರಿದ ನೀಲಿ
ಹಾಗೇ ಕಳಚಿ ಕೆಳಗೆ
ಕಡಲಿಗೆ ಜಾರಿ
ತೆರೆತೆರೆಯಲಿ ಬೆರೆತು ನೊರೆನೊರೆಯಾಗಿ
ಬೆಳ್ಳಗೆ ಬೆಳಗು ಮೂಡಿಸಿದ
ಬೆರಗು

ಕಡಲ ತೆರೆತೆರೆಯಲೂ
ತನ್ನ ತೊಳೆದುಕೊಂಡ ಬಿಳುಪು
ಮೇಲೆ ಖಾಲಿ ಖಾಲಿ, ನೀಲಿ ನೀಲಿ
ಆಗಸಕೆ ಚಿಮ್ಮಿ
ಕುಂಚದ ಬೀಸಂತೆ
ಗರಿಗರಿಯಾಗಿ ಮಿಂಚಾದ
ಬೆರಗು

ಅಲ್ಲೇ ದೂರ ನಿಂತು
ಮನದ ಬಾಗಿಲು ಮುರಿದು
ಇಂಚಿಂಚೇ ಮನಸ ಒತ್ತುವರಿ ಮಾಡುವ
ಹುಡುಗ
ಮುದ್ದಾದಾದ ನಗೆ ಮೊಗೆದು
ಚಂದಮನ ತಿಂಗಳ ಸುರಿದು
ಕುಡಿ ಕಂಗಳಲೇ ಕಿಚ್ಚಿಟ್ಟು ತಣ್ಣಗಿರುವ
ಹುಡುಗಿ

ಒಳಗೂ ಹೊರಗೂ ಭಾವ ಬೆರಗು...