Thursday, August 12, 2010

ಹಾಗೇ ಒಂದು ಕಥೆ

ಬ್ರಹ್ಮಾಂಡವೆಂಬೋ ಬ್ರಹ್ಮಾಂಡದಲ್ಲಿ ಭುವಿಯೆಂಬ ಸಣ್ಣದೊಂದು ಬಿಂದು. ಅಲ್ಲೋ ಪಿತಗುಟ್ಟುವಷ್ಟು ಜನ, ಮನುಕುಲವೆಂದು ಕರೆದುಕೊಂಬರು ತಮ್ಮನ್ನು ಅವರು. ಆ ಮನುಕುಲಕ್ಕೆ ಇತಿಹಾಸವೆಂಬೋ ಇತಿಹಾಸವೂ, ಭವಿಷ್ಯವೆಂಬೋ ಭವಿಷ್ಯವೂ ಉಂಟು. ಆದರೆ ಅವರೆಲ್ಲಾ ವರ್ತಮಾನದಲ್ಲೇ ಫುಲ್ ಬಿಜಿ... ಇತಿಹಾಸವನ್ನು ಕಾಣುವ ಒಳಗಣ್ಣಾಗಲಿ, ಭವಿತವ್ಯವ ದಿಟ್ಟಿಸುವ ದೃಷ್ಟಿಯಾಗಲಿ ಬಹುತೇಕ ನಶಿಸಿದೆ.

ಇಂತಿಪ್ಪ ಮನುಕುಲದ ಇತಿಹಾಸ, ವರ್ತಮಾನವನ್ನು ಯಾವನೋ ಪರದೇಶಿ ಕೆದಕಲಾಗಿ ಕಂಡದ್ದಾದರೂ ಇಷ್ಟು:
ಪ್ರೀತಿಸುವವರಿಗೆ ಹತ್ತಿರವಾಗದ, ಕಾತರಿಸಿದವರೊಡನೆ ಕೂಡಲಾಗದ, ಬಯಸಿದವರನ್ನು ಪಡೆಯಲಾಗದ ಅಸಹಾಯಕವೂ, ಗೊಂದಲಮಯವೂ ಆದ ಜೀವನ ಅಲ್ಲಿ ಬಹುಪಾಲು ಜನರದ್ದು. ಪ್ರೀತಿಸಿ, ಕಾತರಿಸಿ, ಬಯಸಿ ಪಡೆದವರು ಕೆಲ ಮಂದಿ, ಅವರದೋ ಧನ್ಯತಾಭಾವ... ಉಳಿದಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅನುಭವಿಗಳು, ಅನುಭಾವಿಗಳು, ಅವರಂತು ಅವನ್ಯಾರೋ 'ಭಗವಂತನೆಂಬ ಭಗವಂತನು' ಕೊಟ್ಟದ್ದ ಪಡೆದು ಗೊಂದಲಗಳಿಂದ ದೂರವೇ ಉಳಿದವರು... ಹೀಗಾಗಿ ಈ ಎಲ್ಲ ಮಂದಿಗೆ ಅವರವರದೇ ಆದ ಸತ್ಯಗಳು...

ಫ್ಲ್ಯಾಶ್ ಬ್ಯಾಕ್ ನಲ್ಲೂ ಫಾಸ್ಟ್ ಫಾರ್ವರ್ಡ್ ನಲ್ಲೂ, ಸ್ಲೋ ಮೋಷನ್ನಲ್ಲೂ, ನಾರ್ಮಲ್ ಮೋಡ್ನಲ್ಲೂ ಅಲ್ಲಿ ಯಾವಾಗಲೂ ಇದೇ ಕಥೆ..

ಇದರಿಂದಾಗಿ ಅಲ್ಲಿ ಒಟ್ಟೊಟ್ಟಿಗೇ ತಾಳ್ಮೆಯೂ, ಅಸಹನೆಯೂ, ಗೊಂದಲ, ಧ್ಯಾನ, ಹಿಂಸೆ, ಶಾಂತಿ, ಕೊಲೆ, ಸುಲಿಗೆ, ವಂಚನೆ, ಕ್ರೌರ್ಯ, ಮದ, ಮತ್ಸರ, ಪ್ರೀತಿ, ಮೋಹ, ಪ್ರೇಮ, ಕಾಮ, ಲಾಂಗು, ಮಚ್ಚು, ಕಾರತೂಸಿನ ಹೊಗೆ, ಕೆಂಪು ಗುಲಾಬಿ, ಬಿಳಿ ಪಾರಿವಾಳ ಮತ್ತೆ ಕೆಲ ದೇವತೆಯರು ಅವರ ಆರಾಧಕರೂ ಇದ್ದರು....

ಇದೆಲ್ಲ ಕಾರಣದಿಂದ ಮನುಕುಲವೆಂಬ ಕುಲದ ಕಥೆಯು ಏಕಕಾಲಕ್ಕೆ ಅಸಹನೀಯವೂ, ಆದರಣೀಯವೂ, ದಾರುಣವೂ, ಪ್ರೀತಿಪೂರ್ವಕವೂ ಆಗಿತ್ತೆಂಬುದು ಕಂಡು ಬಂದಿತೆಂಬಲ್ಲಿಗೆ ಪರಿಸಮಾಪ್ತಿ.

-------ಓಂ ಜನಗಣ ಮನ ಢಣಢಣ ಭಣಭಣ....-----------

No comments:

Post a Comment