Sunday, October 3, 2010

ಉಸಿರೊಳಗಣ ಬಣ್ಣ

And the line goes:
multitude are there n 'l be,
but honour yourself with the humbleness of accepting commoners commonness
but not really being one...


ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಅವನು ಕಡೆಯ ಬಾರಿಗೆಂದು ಹುಡುಕಲು ಆರಂಭಿಸಿದ.
ಕಟ್ಟಕಡೆಯ ಬಾರಿಯಾದರೂ ತನ್ನದೊಂದು ಕನಸಿನ ಸೌಧ ಕಟ್ಟಲು ಸಾಧ್ಯವೇ? ಮಹತ್ವಾಕಾಂಕ್ಷೆಗಳ ಮೂಟೆಯನನ್ನು ಪಕ್ಕಕ್ಕಿಟ್ಟು ಅದರಲ್ಲಿದ್ದ ಒಂದಾದರೂ ಬೀಜವನ್ನು ನಿಜಕ್ಕೂ ವಾಸ್ತವದಲ್ಲಿ ಮೊಳಕೆ ಒಡೆಯಿಸಲು ಸಾಧ್ಯವೇ ಎನ್ನುವಲ್ಲಿಗೆ ಬಂದು ನಿಂತಿತ್ತು ಜೀವನ..

ಅಲ್ಲಿಗೆ ಅಂತಿಮ ಹೋರಾಟಕ್ಕೆ ರಣಾಂಗಣ ಸನ್ನದ್ಧವಾಗಿತ್ತು. ಅಲ್ಲಿ ಶತೃವೂ ಅವನೇ ಮಿತ್ರನೂ ಅವನೇ, ಹೆದೆಯೇರಿಸುವ ಧನುರ್ಧಾರಿಯೂ ಅವನೇ, ತೋಪು ಹಾರಿಸುವ ಫೌಜುದಾರನೂ ಅವನೇ. ತನ್ನೊಡನೆ ತನಗೇ ಹೋರಾಟ. ಜೀವನ ಪಾತ್ರೆಯಲ್ಲಿನ ಬಣ್ಣಗಳೆಲ್ಲಾ ಅದಾಗಲೇ ಸೂಕ್ತ ಆರೈಕೆ ಇಲ್ಲದೆ ಗಟ್ಟಿಯಾಗಿದ್ದವು. ಬದುಕಿನ ಕ್ಯಾನ್ವಾಸ್ ಮೇಲೆ ಮೂಡಿಸಲೆಂದು ಏನೆಲ್ಲಾ ಜತನ ಮಾಡಿದ್ದರೂ ಕಾಲನ ಉರಿಬೇಗೆಗೆ ಹೆಕ್ಕಳಿಕೆ ಎದ್ದಿದ್ದವು. ಇದ್ದ ಬದ್ದ ಆಸೆಗಳನ್ನೆಲ್ಲಾ ಕಕ್ಕಿದ್ದ ಮನಸಂತೂ ಎಂದೋ ಖಾಲಿಯಾಗಿತ್ತು. ಎದುರಿಗಿದ್ದ ರಸ್ತೆಯೂ ಸೊರಗಿದ ಹಾಗೆ ಕಾಣುತ್ತಿತ್ತು. ಹಾಗೆ ಸಾಗುವಾಗ ಶತಮಾನದ ಹಳೆಯ ಲೇಖನಿಯೊಂದು ದಾರಿ ಬದಿಯಲ್ಲಿ ಸಿಕ್ಕಿತು. ಮುಂದೊಂದು ತಗ್ಗಿನಲ್ಲಿ ಗತಕಾಲದ ಶಾಯಿ ಕುಡಿಕೆ ಬಿದ್ದಿತ್ತು.

ಬೋರಲು ಬಿದ್ದಿದೆ
ಶಾಯಿ ಇಲ್ಲದ ಕುಡಿಕೆ;
ಶಾಯಿ ಮುಗಿದರೂ ಪರವಾಗಿಲ್ಲ
ಬರೆಸಿಕೊಳ್ಳುವ
ಪದಗಳೇ ಮುಗಿದರೆ ಕಷ್ಟ


ಹಾಗೆಂದುಕೊಂಡು ಹೆಜ್ಜೆ ಹಾಕಿದ. ಅಲ್ಲೊಂದು ಹೂವು ಬಾಡಿ ಬಿದ್ದಿತ್ತು. ಅದರ ಬಣ್ಣ ಕರಗಿ ನೆಲದೊಳಗೆ ಇಳಿಯುತ್ತಿತ್ತು. ಹಾಗೆ ಅದನೆತ್ತಿಕೊಂಡ. ಅದರೊಳಗೆ ಮೊನ್ನೆ ಇದ್ದಿರಬಹುದಾದ ಸುಗಂಧವ ಇಂದು ಆಘ್ರಾಣಿಸಿದ. ಮೆಲ್ಲನೆ ನೇವರಿಸಿ ಹೇಳಿದ, 'ಚಿಂತೆಯಿಲ್ಲ ಬಿಡು, ನಿನ್ನದೊಂದು ಸುಂದರ ಕಾವ್ಯ ಮೊನ್ನೆಯ ಗಾಳಿಯಲ್ಲಿ ಇದೆ. ಕಣ್ಣಾಚೆಗಿನ, ಕಿವಿಯಾಚೆಗಿನ ಅಷ್ಟೇ ಅಲ್ಲ, ಕವಿಯ ಆಚೆಗಿನ ಕಾವ್ಯ ಅದು. ಮೊನ್ನಿನ ಗಾಳಿಯಲ್ಲಿ ನೀನು ಬರೆದಿರುವ ಸುಗಂಧೀ ಸಾಲುಗಳು ಯಾವತ್ತೂ ನನ್ನ ಉಸಿರಾಗಲಿ' ಎಂದ. ಬಾಡಿದ್ದ ಹೂವು ಬಣ್ಣ ಮಾಸುವ ಮುನ್ನ ಮನಸಾರೆ ನಕ್ಕಿತು, ಸಂತೃಪ್ತಿಯಿಂದ. ಭಗವಂತನೇ ಕೈಯಲ್ಲಿ ಎತ್ತಿಕೊಂಡು ರಮಿಸಿ, ಮುದ್ದಿಸಿದ ಹಾಗೆ ಮುದಗೊಂಡು ನೇರ ಸ್ವರ್ಗಕ್ಕೆ ಜಿಗಿಯಿತು.

ಬೆಟ್ಟದಾಚೆಗಿನ ಕೊರಕಲು ಕಣಿವೆಯಲ್ಲಿ ತನ್ನವೇನಾದರೂ ಕನಸುಗಳು ತೇಲುತ್ತಿವೆಯೇನೋ ಎಂದು ಕೊರಗುತ್ತಲೇ ನೋಡಲು ಹೊರಟಿದ್ದವನ ಮನಸು ಈಗ ಬದಲಾಗಿತ್ತು. ತನ್ನೊಳಗಿನ ಯುದ್ದವ ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಿದ. ಹಳೆ ಬಣ್ಣಗಳಿಗೆ ತರ್ಪಣ ಬಿಟ್ಟ. ಸೀದಾ ಹೊರಟವನು ಸಂತೆಯಲ್ಲಿ ಕುಂತ, ಮಾಲ್ ಗಳಲಿ ಮಿಂದ. ಗದ್ದಲದಲ್ಲಿನ ಮೌನ ಆಲಿಸಿದ, ಮೌನದಲ್ಲಿನ ಗದ್ದಲ ಹುಡುಕಿದ. ಬಣ್ಣವೇ ಇಲ್ಲದ ಕನಸುಗಳ ಕಂಡ, ಶೂನ್ಯದೊಳಗಿನ ಬಣ್ಣಗಳ ಅಂಗೈ ಮೇಲೆ ಸುರುವಿಕೊಂಡ.
ಮೌನದಲ್ಲಿ ಕುದಿಯುವುದನ್ನೂ, ಕುಲುಮೆಯ ತಿದಿಯಲ್ಲಿ ಧ್ಯಾನಿಸುವುದನ್ನೂ ಕಂಡುಕೊಂಡ. ಕಡೆಗೆ ಗಂಭೀರವಾಗಿದ್ದೂ ಭೋರ್ಗರೆಯುತ್ತಾ, ತಣ್ಣನೆಯ ಕಣ್ಣುಗಳಲ್ಲೇ ಅಬ್ಬರಿಸುತ್ತಾ ಮತ್ತೊಮ್ಮೆ ಮುಗಿಬಿದ್ದ - ಜೀವನದ ಮೇಲಲ್ಲಾ, ಕಾಲನ ಮೇಲೆ...

ಯಾರೋ ಮಾತಾಡಿಕೊಂಡರು ಇಷ್ಟಕ್ಕೆಲ್ಲಾ ಕಾರಣ ಅವನು ಸೌಗಂಧೀ ಕಾವ್ಯವನ್ನು ಉಸಿರನಲ್ಲಿಯೇ ಓದಿದ್ದು ಎಂದು...
ಇರಬಹುದೇನೋ!!!