Tuesday, September 15, 2009

ಎರಡೂ ಮುಕ್ಕಾಲು ಪ್ರತಿಮೆ

ಬದುಕು ದಕ್ಕದ ಅಕ್ಷರ ಮೋಹಿ ಕವಿ(!)ಗೆ
ಅಕಸ್ಮಾತ್‌
ಮಲ್ಲೇಶ್ವರದ ಹೂ ಮಾರುಕಟ್ಟೆ ಬಳಿ ಎರಡೂ ಮುಕ್ಕಾಲು ಪ್ರತಿಮೆ ದಕ್ಕಿತು;
ಎರಡು ಪೂರ್ಣ ಹಾಗು ಒಂದು ಮುಕ್ಕು.

ಪ್ರತಿಮೆ,
ಕವಿ ಸಮಯದ - ಕಲಾವಿದ ಮನದ ಮೂಸೆಯೊಳಗಣ ದೀಪ್ತಿ;
ಆಕಾರಗಳಿಲ್ಲದ್ದು,
ಭಾವ ಅಕ್ಷರಗಳ ಅಮೂರ್ತ ಬೆಡಗು.

ಏನು ಮಾಡುವುದು ಇವನ್ನು
ಒಂದಷ್ಟು ಹೊತ್ತು ಹೊರಳಿಸಿ, ತಿರುಗಿಸಿ ನೋಡಿದ
ಕಡೆಗೆ
ಕವಿಯೊಬ್ಬನ `ಆತ್ಮಘಾತುಕ' ನಿರ್ಧಾರ ಕೈಗೊಂಡ
`ಈ ಎರಡೂ ಮುಕ್ಕಾಲು ಪ್ರತಿಮೆಯನು ಕೊಟ್ಟು ಬಿಡುವೆ '...

ಯಾರಿಗೆ ಕೊಡುವುದು,
ವ್ಯಾಸನಿಗೋ, ಹೋಮರನಿಗೋ?
ಶೇಕ್ಸಪಿಯರ್‌, ಕಾಳಿದಾಸರಿಗೆ..!
ಬೇಂದ್ರೆ, ಯೇಟ್ಸ್‌, ಇಲಿಯಟ್‌, ನೀಲುಗೆ...

ಇಲ್ಲಾ,
ಪ್ರತಿಮಾ ಬೆಡಗಲಿ ಅನುಭಾವ ಸಾಂದ್ರಗೊಳಿಸಿದ ಅಲ್ಲಮನಿಗೆ,
ಅಲ್ಲಾ - ಮಾ ಗಹಗಹಿಸಿದರೆ?....
ಧೈರ್ಯ ಸಾಲದ ಮೇಲೆ
ಗಿರಿ ಏರುವುದೇ ಒಳಿತು.

ಹೌದು ,
ಅಲ್ಲಿ ದತ್ತನ ಮುಂದೆ ಮಂಡಿಯೂರಿ
ಅವನ ಉಡಿಗೆ ಒಪ್ಪಿಸಿಬಿಡುವೆ....

ಅದೇಕೋ,
ಹಾಗೆಂದುಕೊಂಡವಗೆ ಬದುಕ ಜಂಜಡ
ನೆನಪ ಮಾಸಿತು
ನಿರ್ಧಾರ ಕಂದರವಾಯಿತು

ದಿನ ಸರಿಯಿತು,
ನೇಸರ ಅದೆಷ್ಟೋ ಬಾರಿ
ಶಿವ ಸಾಮ್ರಾಜ್ಯದಿ ಮುಳುಗಿ ಮೇಲೆದ್ದ;

ಮುಂದೆಂದೋ
ನೆನಪಿನ ಕಪಾಟಲಿ ಅನೂಹ್ಯ ಸದ್ದು
ಮತ್ತೆ, ಮತ್ತೆ
ಎರಡೂ ಮುಕ್ಕಾಲು ಪ್ರತಿಮೆ;
ಹೊರಟೇ ಬಿಟ್ಟ ನೇರ ಗಿರಿಗೆ...

ಅದು ಸೂರ್ಯಾಸ್ತ
ಅವ್ಯಕ್ತ ಕಂಗಳ ಕಲಾವಿದನೊಬ್ಬ
ಗಿರಿ ಮೇಲೆ ಕ್ಯಾನ್ವಾಸ್‌ ಹರಡಿ
ಖಾಲಿ ಕುಳಿತಿದ್ದ
ಎಲ್ಲ ದಕ್ಕಿದ ನಂತರವೂ `ವ್ಯಾಳಾ' ಕಾಯೋ
ಸಂಗೀತಗಾರನಂತೆ...

ದತ್ತನ ಉಡಿಗೆ ಹಾಕೋ ಮನಸಲಿ
ಮಿಂಚು
ದತ್ತನೇ ದೀಪ್ತಿ ಎಂದು ನೇರ ಖಾಲಿ ಕ್ಯಾನ್ವಾಸ್‌ನತ್ತ
ಸರಿಯಿತು ಹೆಜ್ಜೆ

`ಹಿಡಿ ಅಂಗೈ,
ತಗೋ ಈ ಎರಡೂ ಮುಕ್ಕಾಲು ಪ್ರತಿಮೆ
ನನ್ನ ಭವದ ಅಷ್ಟೂ ದುಡಿಮೆ'
ಕ್ಷಣ ಕಾಲ ಮೌನ.....
ಅಶ್ರುವಿನಲಿ ಮಿಂದು ಅವನೆಂದ
`ಮೂರೂ ಮುಕ್ಕಾಲು'

ಕಿವಿ ಮೋಸ ಹೋದವೇ?
ಮತ್ತೆ ಇವನೆಂದ `ಎರಡೂ ಮುಕ್ಕಾಲು`
ನಿಮ್ಮ ಬಳಿ ಎರಡೂ ಮುಕ್ಕಾಲು
ಆದರೆ
ನನ್ನೆದುರಿಗೆ `ಮೂರು ಮುಕ್ಕಾಲು'....

ಎರಡು ಜೋಡಿ ಕಂಗಳಲ್ಲೂ ಧನ್ಯಾಶ್ರು....

ಅಲ್ಲೇ ದೂರದಲಿ
ಗುಡುಗುಡಿಯಾಗ ತೇಲಿದ್ದ ಫಕೀರ
ಬೆಳಕಿನ ನಗೆ ನಕ್ಕ

No comments:

Post a Comment